ಮಂಡೆಕೋಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಅಕ್ಟೋಬರ್ 26 ರಂದು ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಯೋಜನೆಯ ಅಜ್ಜಾವರ ವಲಯಕ್ಕೆ ಸಂಬಂಧಿಸಿದ ಮಂಡೆಕೋಲು ಗ್ರಾಮದ ನಾಲ್ಕು ಒಕ್ಕೂಟಗಳಾದ ಮಂಡೆಕೋಲು, ಕಲ್ಲಡ್ಕ-ಪೆರಾಜೆ, ಪೇರಾಲು ಹಾಗೂ
ಪೇರಾಲು-ಅಂಬ್ರೋಟಿ-ಎ ಒಕ್ಕೂಟಗಳ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಆ ಬಳಿಕ ನಡೆದ ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ವಹಿಸಿದ್ದರು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಉದ್ಘಾಟಿಸಿದರು.ಮುಖ್ಯ ಭಾಷಣಕಾರರಾಗಿ ಆಗಮಿಸಿದ ಖ್ಯಾತ ವಾಗ್ಮಿಗಳು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ನಾಡಿನ ಅಭ್ಯುದಯಕ್ಕೆ ಕಂಕಣ ತೊಟ್ಟಿರುವ ಸಂಘಟನೆಯಾಗಿದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವಾಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ಮಾತನಾಡಿದರು. ಭಜನಾ ಪರಿಷತ್ ಅಜ್ಜಾವರ ವಲಯಾಧ್ಯಕ್ಷ ಪ್ರಕಾಶ್ ಕಣೆಮರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮದ ಅತ್ಯುತ್ತಮ ಸ್ವಸಹಾಯ ಸಂಘಗಳು ಹಾಗೂ ಪ್ರಗತಿಬಂಧು ತಂಡಗಳನ್ನು ಗುರುತಿಸಿ ಗೌರವಿಸಲಾಯಿತು. 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿ ತೇರ್ಗಡೆಯಾದ ತಲಾ ಹತ್ತು ವಿಧ್ಯಾರ್ಥಿಗಳಂತೆ ಒಟ್ಟು ಇಪ್ಪತ್ತು ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಲಯ ಮೇಲ್ವಿಚಾರಕರಾದ ಅನಿತಾ ಸ್ವಾಗತಿಸಿ ಜಯಪ್ರಕಾಶ್ ಕೊಡೆಂಚಿಕಾರ್ ಧನ್ಯವಾದ ಸಮರ್ಪಿಸಿದರು. ಸೇವಾ ಪ್ರತಿನಿಧಿ ವೇದಾವತಿ ವರಧಿ ವಾಚಿಸಿದರು. ಸಾವಿತ್ರಿ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.















