ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 53ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಶ್ರೀ ದೇವಳದ ರಥಬೀದಿಯ ಕುಕ್ಕೆಶ್ರೀ ಕಲಾವೇದಿಕೆಯಲ್ಲಿ ಎಸ್ಎಸ್ಪಿಯು ಕಾಲೇಜಿನ ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳಿಂದ ಪ್ರದರ್ಶಿತವಾದ ಜನಪದೀಯ ನೃತ್ಯ ಸಿಂಚನ ಕಲಾಸಕ್ತರನ್ನು ರಂಜಿಸಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ಪ್ರತಿಭೆಯು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಜನತೆಯ
ಮನಸೂರೆಗೊಂಡಿತು.ಸುಮಾರು 2 ಗಂಟೆಗಳ ಕಾಲ 125ಕ್ಕೂ ಅಧಿಕ ವಿದ್ಯಾರ್ಥಿಗಳು ನೃತ್ಯ ವೈವಿದ್ಯ ನಡೆಸಿಕೊಟ್ಟರು.ವಿದ್ಯಾಲಕ್ಷ್ಮಿ ಮತ್ತು ತಂಡದವರು ವರಹ ರೂಪಂ ಹಾಡಿನ ಭರತನಾಟ್ಯ ಮತ್ತು ಮತ್ತು ನಾಟ್ಯ ಶೈಲಿಯ ಸಮ್ಮಿಲನದ ನೃತ್ಯ ಪ್ರದರ್ಶಿಸಿದರು. ಆಶೀತಾ, ಚಂದನ್, ಶಿಲ್ಪಾ, ಗಾಯತ್ರಿ, ನವ್ಯಶ್ರೀ, ವಿನ್ಯಾ, ಧನ್ಯಶ್ರೀ ಮತ್ತು ತಂಡದವರು ದೇವತಾ ಗೀತೆಗೆ ನರ್ತನ ಮಾಡಿದರು.ವೈಶಾಲಿ ಮತ್ತು ತಂಡದವರು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಹಾತ್ಮೆ ಎಂಬ ನೃತ್ಯ ನಾಟಕ ಪ್ರದರ್ಶಿಸಿದರು.ಚಿನ್ಮಿಯಿ ಡಿ.ಎಸ್ ಭಕ್ತಿಗೀತೆ ಹಾಡಿದರೆ ನುರಿತ ಚೆಂಡೆ ವಾದಕರನ್ನೊಳಗೊಂಡ ಮಿಥುನ್ ಮತ್ತು ಸಂಗಡಿಗರ ತಂಡ ಸಿಂಗಾರಿ ಮೇಳ

ನುಡಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಅಕ್ಷಯ್ ಕಂದಡ್ಕ ಮತ್ತು ತಂಡದವರು ಹುಲಿವೇಷ ಪ್ರದರ್ಶನ ನೀಡಿದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಮತ್ತು ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್ ಸಂಯೋಜಿಸಿದ್ದರು. ಸಾಂಸ್ಕೃತಿಕ ತಂಡದ ಸಹಸಂಚಾಲಕ ರತ್ನಾಕರ ಸುಬ್ರಹ್ಮಣ್ಯ, ಉಪನ್ಯಾಸಕರಾದ ಶ್ರೀಧರ್ ಪುತ್ರನ್, ಸವಿತಾ ಕೈಲಾಸ್ ಮತ್ತು ಶ್ಯಾಮಿಲಿ, ಹಿರಿಯ ವಿದ್ಯಾರ್ಥಿಗಳಾದ ರಾಧಾಕೃಷ್ಣ ದೇವರಗದ್ದೆ ಮತ್ತು ಚಂದ್ರಶೇಖರ್ ಮಲ್ಲಿಗೆಮಜಲು ಸಹಕರಿಸಿದರು.
ಸಾಂಸ್ಕೃತಿಕ ವೈವಿಧ್ಯ:
ಗಣೇಶೋತ್ಸವದಲ್ಲಿ ಕುಕ್ಕೆಶ್ರೀ ಭಜನಾ ಮಂಡಳಿ, ಶ್ರೀವಲ್ಲೀ ಭಜನಾ ಮಂಡಳಿ ಮತ್ತು ವಿದ್ಯಾಸಾಗರ ಭಜನಾ ಸಂಗಮದ ಕಲಾವಿದರಿಂದ ಭಜನೆ ನಡೆಯಿತು. ಸುನಾದ ಸಂಗೀತ ಕಲಾಶಾಲೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳಿಂದ ಭಕ್ತಿಗಾನ, ಉಜಿರೆಯ ವೈಷ್ಣವಿ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿAದ ನೃತ್ಯ ಸಂಗಮ, ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕುಮಾರ ವೈಭವ, ಹೊಸಬೆಟ್ಟು ನೃತ್ಯರಂಗ ಡ್ಯಾನ್ಸ್ ಅಕಾಡೆಮಿಯ ಪೂಜಾ ಪ್ರಭಾತ್ ತಂಡದವರಿಂದ ನೃತ್ಯ ವೈಭವ, ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಕ್ಷಿತ್ ರಾಮಕುಂಜ ಅವರಿಂದ ಹಾಸ್ಯಮಯ ಮಿಮಿಕ್ರಿ, ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಅಲೆಬುಡಿಯೆರ್ಗೆ ಹಾಸ್ಯಮಯ ತುಳು ನಾಟಕ ಪ್ರದರ್ಶಿತವಾಯಿತು.ಕಾರ್ಯಕ್ರಮದ ಕೊನೆಯಲ್ಲಿ ಸರ್ವ ಕಲಾವಿದರಿಗೂ ಅಧ್ಯಕ್ಷ ದಿನೇಶ್ ಸಂಪ್ಯಾಡಿ ಮತ್ತು ಪದಾಧಿಕಾರಿಗಳು ಸ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.