ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯ ಕಲಿಯುತ್ತಿರುವ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರ ಅಧ್ಯಯನ ಪ್ರವಾಸ ಏರ್ಪಡಿಸಲಾಯಿತು. ಪುತ್ತೂರು ಮತ್ತು ಉಪ್ಪಿನಂಗಡಿ ಪರಿಸರದ ಕೆಲವು ಕೃಷಿ ಸಾಧಕರನ್ನು ಸಂದರ್ಶಿಸಿ, ಕೃಷಿ ಕ್ಷೇತ್ರ ವೀಕ್ಷಿಸಿ, ಅಲ್ಲಿನ ವಿಶೇಷತೆಗಳನ್ನು ಅವರ ಕೃಷಿ ಸಾಧನೆಗಳನ್ನು ಪರಿಚಯಿಸಿ
ಕೊಡಲಾಯಿತು.ಪುತ್ತೂರು ತಾಲೂಕಿನ ಪಾಣಾಜೆ ಸಮೀಪದ ಬೈಂಕ್ರೋಡು ವೆಂಕಟಕೃಷ್ಣ ಭಟ್ (ಮಹೇಶ್ ಭಟ್)ರವರ ಮನೆಗೆ ಭೇಟಿ ನೀಡಿ ಮುಜೆಂಟಿ ಜೇನು ಕೃಷಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಪುತ್ತೂರಿನ ನಿಡ್ಪಳ್ಳಿಯಲ್ಲಿ ಸಾವಯವ ತರಕಾರಿ ಕೃಷಿಯಲ್ಲಿ ಯಶಸ್ಸು ಸಾಧಿಸಿರುವ ಹರಿಕೃಷ್ಣ ಕಾಮತ್ ಅವರನ್ನು ಭೇಟಿ ಮಾಡಲಾಯಿತು. ದೇಸಿ ತಳಿ ಹೈನುಗಾರಿಕೆ ಮತ್ತು ಮಿಶ್ರ ಕೃಷಿ ಮೂಲಕ, ಕೃಷಿ ಭಾಗವಾಗಿ ಹೈನೋದ್ಯಮದ ಅಗತ್ಯತೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆ ಪರಿಸ್ಥಿತಿ, ಬದಲಿ ಬೆಳೆಗಳ ಪ್ರಾಮುಖ್ಯತೆ, ನೀರಿನ ಸಂರಕ್ಷಣೆ ಮತ್ತು ವಿವಿಧ ಪ್ರಯೋಜನಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ಪಡೆದುಕೊಳ್ಳಲಾಯಿತು.
ಉಪ್ಪಿನಂಗಡಿ ಸಮೀಪ ಕಡಮ್ಮಾಜೆ ಫಾರ್ಮ್ಸ್ನ ಪ್ರಗತಿಪರ ಕೃಷಿಕ ದೇವಿಪ್ರಸಾದ್ ಮತ್ತು ಅವರ ಕುಟುಂಬವನ್ನು ಸಂದರ್ಶಿಸಿದಾಗ ಅವರ ಕೃಷಿ ಬದುಕಿನಲ್ಲಿ ಬೆಳೆದು ಬಂದ ದಿನಗಳ ಪ್ರಯತ್ನಗಳನ್ನು ತಿಳಿದುಕೊಂಡು ಮನೆಯಂಗಳದಲ್ಲಿ ನಿರ್ಮಿಸಿದ ಉದ್ಯಾನವನ, ವಿವಿಧ ಹಣ್ಣಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಕೋಳಿ ಇನ್ನಿತರ ಪ್ರಾಣಿ ಪಕ್ಷಿಗಳ ಸಂಗ್ರಹ, ಅಡಿಕೆ, ತೆಂಗು, ಕರಿಮೆಣಸು, ಬಾಳೆ ಇತ್ಯಾದಿ ಬೆಳೆಗಳ ಬಹುಬಗೆಯ ತಳಿಗಳು, ಹಸಿ ಕಸವನ್ನು ಸಂಗ್ರಹಿಸಿ ತಂದು ಕಾಂಪೋಸ್ಟ್ ಗೊಬ್ಬರ ತಯಾರಿ, ಎರೆಗೊಬ್ಬರ, ವಿವಿಧ ಮೀನು, ಆಡು, ಹಂದಿ, ಕುರಿ, ಕೋಳಿ ಸಾಕಾಣಿಕೆ ಇತ್ಯಾದಿ ವೀಕ್ಷಿಸಿ ವಿವರಣೆ ಪಡೆದು ಕೊಳ್ಳಲಾಯಿತು.ಶಿಬಿರದ ನೇತೃತ್ವವನ್ನು ಎನ್ನೆಂಸಿ ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪೆಲ್ತಡ್ಕ ಹಾಗೂ ಉಪನ್ಯಾಸಕರಾದ ಅಕ್ಷತಾ ಬಿ, ಭವ್ಯ ಪಿ ಎಮ್, ಕೃತಿಕಾ ಕೆ ಜೆ, ಅಜಿತ್ ಕುಮಾರ್ ಮತ್ತು ಪಲ್ಲವಿ ವಹಿಸಿದ್ದರು. ಕಾಲೇಜು ಸಿಬ್ಬಂದಿ ಭವ್ಯ ಮತ್ತು ದೀಪಕ್ ಸಹಕರಿಸಿದರು.