ಸುಳ್ಯ:ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಭಾಗದ ಕೂಜಿಮಲೆ ಪ್ರದೇಶದಲ್ಲಿ ಬುಧವಾರ ಅಪರಿಚಿತ ಮಹಿಳೆಯ ಓಡಾಟ ಕಂಡು ಬಂದಿದೆ ಎಂದು ಹೇಳಲಾಗಿರುವ ಹಿನ್ನಲೆಯಲ್ಲಿ ಎಎನ್ಎಫ್ ಶೋಧ ಚುರುಕುಗೊಳಿಸಿದೆ. ದಕ್ಷಿಣ ಕನ್ನಡ-ಕೊಡಗು ಗಡಿ ಪ್ರದೇಶ ಕಲ್ಮಕಾರು ಸಮೀಪದ
ಕೂಜಿಮಲೆ ಎಸ್ಟೇಟ್ ಕೊಡಗು ಜಿಲ್ಲೆಯ ವ್ಯಾಪ್ತಿ ಯಲ್ಲಿದೆ. ಬುಧವಾರ ಹಗಲು ಮಹಿಳೆಯೋರ್ವರು ಎಸ್ಟೇಟ್ನ ರಬ್ಬರ್ ತೋಟದಲ್ಲಿ ಸಂಚರಿಸುತ್ತಿರುವುದನ್ನು ಕಂಡು ಬಂದಿದೆ ಎನ್ನಲಾಗಿದ್ದು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಆಗಮಿಸಿ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ನಕ್ಸಲ್ ನಿಗ್ರಹ ಪಡೆ ಐನೆಕಿದು, ಕೂಜಿಮಲೆ ಆಸುಪಾಸಿನಲ್ಲೇ ಶೋಧ ಕಾರ್ಯ ಮುಂದುವರಿಸಿದೆ.
ಮಾ. 16ರಂದು ನಾಲ್ವರು ಶಂಕಿತರ ತಂಡ ಕೂಜಿಮಲೆ ಎಸ್ಟೇಟ್ನ ಅಂಗಡಿಗೆ ಭೇಟಿ ನೀಡಿ ಸಾಮಗ್ರಿ ಖರೀದಿಸಿ ಅರಣ್ಯದತ್ತ ತೆರಳಿದ್ದರು. ಮಾ. 23ರಂದು ನಾಲ್ವರು ಶಂಕಿತರು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಭೇಟಿ ನೀಡಿ ಊಟ, ಆಹಾರ ಸಾಮಗ್ರಿ ಪಡೆದುಕೊಂಡು ತೆರಳಿದ್ದರು.ಮಾ. 18ರಿಂದ ಈ ಭಾಗ ಸಹಿತ ವಿವಿಧೆಡೆ ನಕ್ಸಲ್ ನಿಗ್ರಹ ಪಡೆ ನಿರಂತರ ಶೋಧ ನಡೆಸುತ್ತಿದೆ.