ಸುಳ್ಯ:ಸುಳ್ಯ ತಾಲೂಕು ಪಂಚಾಯತ್ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಅರ್ಧಕ್ಕೆ ನಿಂತಿರುವ ಅಂಬೇಡ್ಕರ್ ಭವನದ ಕುರಿತು ಚರ್ಚೆ ನಡೆಯಿತು.ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಈ ಬಾರಿ ಪೂರ್ಣ ಆಗಲೇಬೇಕು. ಅಂಬೇಡ್ಕರ್ ಭವನ ಕಾಮಗಾರಿ ಕೂಡಲೇ
ಮಾಡಿ ಮುಗಿಸೋಣ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅಂಬೇಡ್ಕರ್ ಭವನ ಕಾಮಗಾರಿ ಕುರಿತು ವಿವರ ಪಡೆದ ಶಾಸಕರು, ಈಗಿನ ಎಸ್.ಆರ್. ರೇಟ್ ಪ್ರಕಾರ ಅಂಬೇಡ್ಕರ್ ಭವನ ಪೂರ್ತಿಗೊಳಿಸಲು ಎಷ್ಟು ಅನುದಾನ ಬೇಕಾಗಬಹುದೆಂಬ ಸ್ಪಷ್ಟ ಚಿತ್ರಣ ಕೊಡಿ ಎಂದು ಸಮಾಜಕಲ್ಯಾಣ ಧಿಕಾರಿಗಳಿಗೆ ಸೂಚನೆ ನೀಡಿದರು. 5 ಕೋಟಿ 10 ಲಕ್ಷದಲ್ಲಿ 2 ಕೋಟಿಯ ಕೆಲಸ ಆಗಿದೆ. ಉಳಿಕೆ ಅನುದಾನ ಬೇಕಾಗಿದೆ ಎಂದು ಸಮಾಜಕಲ್ಯಾಣ ಧಿಕಾರಿ ಉತ್ತರಿಸಿದರಲ್ಲದೆ, ಈ ಹಿಂದೆ ನಿರ್ಮಿತಿ ಕೇಂದ್ರಕ್ಕೆ ಕೆಲಸ ವಹಿಸಲಾಗಿತ್ತು. ಈಗ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈಗ
ಅದರ ಸಂಪೂರ್ಣ ವರದಿ ನೀಡಬೇಕು. ಸುಳ್ಯ ಮೀಸಲು ಕ್ಷೇತ್ರ. ಮೀಸಲು ಕ್ಷೇತ್ರದಲ್ಲೇ ಅಂಬೇಡ್ಕರ್ ಭವನ ಆಗದಿದ್ದರೆ ಇನ್ನೆಲ್ಲಿ ಆಗುವುದು. ಭವನ ಈ ಬಾರಿ ಪೂರ್ತಿ ಆಗಬೇಕು. ಎಲ್ಲಾ ಇಲಾಖೆಯವರು ಕೂಡಾ ಸಹಕಾರ ನೀಡಬೇಕು. ಮುಂದೆ ಈ ಕುರಿತು ಕುಂದು ಕೊರತೆ ಸಭೆ, ತಾಲೂಕು ಪಂಚಾಯತ್ ಸಭೆಗಳಲ್ಲಿ ವಿಷಯ ಪ್ರಸ್ತಾಪ ಆಗಲು ಅವಕಾಶ ನೀಡೋದು ಬೇಡ. ಕಾಮಗಾರಿ ಮುಗಿಸಿ, ಲೋಕಾರ್ಪಣೆ ಗೊಳಿಸೋಣ ಎಂದು ಸಭೆಯಲ್ಲಿ ಹೇಳಿದರು.
ಅಡಿಕೆ ಎಲೆ ಹಳದಿ ರೋಗ ಹಾಗು ಎಲೆ ಚುಕ್ಕೆ ರೋಗ ತಾಲೂಕಿನಲ್ಲಿ ಎಷ್ಟು ವ್ಯಾಪಿಸಿದೆ ಎಂದು ಶಾಸಕರು ತೋಟಗಾರಿಕಾ ಅಧಿಕಾರಿಯನ್ನು ಪ್ರಶ್ನಿಸಿದಾಗ, ತಾಲೂಕಿನ 10 ಗ್ರಾಮದಲ್ಲಿ ಅಡಿಕೆ ಎಲೆ ರೋಗ ಇದೆ. ಎಲೆ ಚುಕ್ಕೆ ರೋಗ ಎಲ್ಲ ಕಡೆಯೂ ಇದೆ ಎಂದು ಹೇಳಿದರು. “ಈ ಕುರಿತು ನನಗೆ ವರದಿ ನೀಡಿ. ಅಡಿಕೆ ಎಲೆ ರೋಗ, ಎಲೆ ಚುಕ್ಕೆ ರೋಗಕ್ಕೆ ಸರಕಾರದ ಕಡೆಯಿಂದಲೇ ಸಾಮೂಹಿಕವಾಗಿ ಔಷಧ ಸಿಂಪಡಣೆ ಮಾಡಿದರೆ ಆಗಬಹುದಲ್ಲವೇ” ಎಂದು ಶಾಸಕರು ಹೇಳಿದಾಗ, “ಅಡಿಕೆ ಹಳದಿ ಎಲೆ ರೋಗಕ್ಕೆ ಔಷಧ ಇಲ್ಲ. ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಎಲೆಚುಕ್ಕೆರೋಗಕ್ಕೆ ಔಷಧ ವಿತರಣೆ ನಡೆಯುತ್ತಿದೆ”. ಎಂದು ತೋಟಗಾರಿಕಾ ಅಧಿಕಾರಿ ಹೇಳಿದರು. ಸಾಮೂಹಿಕ ಔಷಧ ಸಿಂಪಡಣೆ ಅಭಿಯಾನ ಮಾಡಿ ಆ ಮೂಲಕ ರೋಗ ತಡೆಗಟ್ಟಬೇಕು ಎಂದು ಶಾಸಕರು ಹೇಳಿದರು.
ಅಡಿಕೆ ಎಲೆ ಹಳದಿ ರೋಗ ವಿಚಾರವಾಗಿ ಅಧಿವೇಶನದಲ್ಲಿ 3 ಬಾರಿ ಪ್ರಶ್ನೆ ಕೇಳಿದೆ. ಉತ್ತರ ಬರುತ್ತಿಲ್ಲ. ಈಕುರಿತು ತಾರ್ಕಿಕ ಉತ್ತರ ಸಿಗಬೇಕೆನ್ನುವ ನಿಟ್ಟಿನಲ್ಲಿ ನನಗೆ ಮತ್ತೊಮ್ಮೆ ವರದಿ ನೀಡಿ ಅಧಿವೇಶನದಲ್ಲಿ ಮಂಡಿಸುವೆ ಎಂದು ಹೇಳಿದರು.
ತಹಶೀಲ್ದಾರ್ ಮಂಜುಳ ಎಂ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು