ಸುಳ್ಯ:ಸುಳ್ಯ ನಗರ ಪಂಚಾಯತ್ನ ತ್ಯಾಜ್ಯ ವಿಲೇವಾರಿ ಘಟಕ ಕಲ್ಚರ್ಪೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಕಲ್ಚರ್ಪೆಯ ಸ್ಥಳೀಯ ನಿವಾಸಿಗಳು ನಗರ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.ಕಲ್ಚರ್ಪೆಯ ತ್ಯಾಜ್ಯ ಘಟಕದಲ್ಲಿ ಬರ್ನಿಂಗ್ ಕಾರ್ಯ ನಡೆಯದೇ ತ್ಯಾಜ್ಯ ತುಂಬಿದ್ದು
ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ ಎಂದು ಮನವಿ ಸಲ್ಲಿಸಲು ನಗರ ಪಂಚಾಯತ್ಗೆ ಮನವಿ ನೀಡಲು ಸ್ಥಳೀಯ ಕೆಲವು ಪ್ರಮುಖರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮನವಿ ಸ್ವೀಕರಿಸಿಲ್ಲ ಮತ್ತು ಸ್ಪಂದಿಸಿಲ್ಲ ಎಂದು ಆರೋಪಿಸಿ ನಗರ ಪಂಚಾಯತ್ ಮುಂಭಾಗದಲ್ಲಿ ಕುಳಿತು ಪ್ರತಿಭಟಿಸಿದರು.
ಕಲ್ಚರ್ಪೆ ಘನ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ಬರ್ನಿಂಗ್ ಕಾರ್ಯಗಳು ನಡೆಯುತ್ತಿಲ್ಲ, ಪ್ಲಾಸ್ಟಿಕ್ ಮಾತ್ರ ಉರಿಸಲಾಗುತ್ತದೆ. ಅಲ್ಲದೇ ಅಲ್ಲಿ ದುರ್ನಾತ ಬೀರುತ್ತಿದೆ ಎಂದು ಅವರು ಹೇಳಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ ಮತ್ತು ಮುಖ್ಯಾಧಿಕಾರಿ ಬಸವರಾಜ್ ಹೆಚ್ ಆರ್ ಪ್ರತಿಭಟನಾಕಾರರ ಜೊತೆ

ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕೆಲ ಹೊತ್ತು ಪರಸ್ಪರ ಮಾತಿನ ಚಕಮಕಿಯೂ ನಡೆಯಿತು. ಟೆಂಡರ್ ಮಾಡಿ ಕಲ್ಚರ್ಪೆಯಿಂದ ಕಸ ಸಾಗಾಟ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಪ್ರತಿಭಟನಾ ನಿರತರಿಗೆ ತಿಳಿಸಿದರು. ಪ್ರಮುಖರಾದ ಅಶೋಕ್ ಪೀಚೆ, ಬಾಲಚಂದ್ರ ಕಲ್ಚರ್ಪೆ, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು, ನಾರಾಯಣ ಜಬಳೆ ಕಲ್ಚರ್ಪೆ ಮತ್ತಿತರರು ಉಪಸ್ಥಿತರಿದ್ದರು.















