ಚೆನ್ನೈ: ಫೆಂಗಲ್ ಚಂಡಮಾರುತದ ಅಬ್ಬರರಕ್ಕೆ ತಮಿಳುನಾಡು ಅಕ್ಷರಷಃ ತತ್ತರಿಸಿ ಹೋಗಿದೆ.ಉತ್ತರ ತಮಿಳುನಾಡಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.ಸೇತುವೆಗಳು ಮತ್ತು ರಸ್ತೆಗಳು ಜಲಾವೃತವಾಗಿದ್ದು ಹಲವು ಗ್ರಾಮಗಳು ಮತ್ತು ಕಾಲೊನಿಗಳು ಸಂಪರ್ಕ ಕಳೆದುಕೊಂಡಿವೆ.ನೂರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿ, ಅಪಾರ ಪ್ರಮಾಣದ
ಬೆಳೆ ಹಾನಿಗೊಳಗಾಗಿದೆ.ಪಶ್ಚಿಮ ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲೂ ಕಳೆದ ಎರಡು ದಶಕಗಳಲ್ಲಿ ಕಂಡುಕೇಳರಿಯದ ಮಳೆ ಸುರಿದಿದೆ. 24 ತಾಸುಗಳಲ್ಲಿ ಕೃಷ್ಣಗಿರಿಯ ಉತಂಗರೈನಲ್ಲಿ 50 ಸೆಂಟಿ ಮೀಟರ್ನಷ್ಟು ಮಳೆಯಾಗಿದೆ. ವೆಲ್ಲುಪುರಂನಲ್ಲಿ 42 ಸೆ.ಮೀ, ಧರ್ಮಪುರಿಯ ಹರೂರಿನಲ್ಲಿ 33 ಸೆ.ಮೀ, ಕಡಲೂರು ಮತ್ತು ತಿರುವಣ್ಣಾಮಲೈನಲ್ಲಿ ದಾಖಲೆಯ 16 ಸೆ.ಮೀ ಮಳೆಯಾಗಿದೆ.ಉತಂಗರೈನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರು ಮತ್ತು ವ್ಯಾನ್ಗಳು ಸೇರಿದಂತೆ ಹಲವು ವಾಹನಗಳು ನೀರಿನ ರಭಸಕ್ಕೆ ತಗ್ಗು ಪ್ರದೇಶದತ್ತ ತೇಲಿಹೋಗಿವೆ. ಕೇರಳದಲ್ಲಿ ಮಂಗಳವಾರ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಸೋಮವಾರ ಕೇರಳದ ಹಲವೆಡೆ ಸಾಧಾರಣ ಮಳೆಯಾಗಿದೆ. ಉತ್ತರ ಮತ್ತು ಕೇಂದ್ರದ ಹಲವು ಪ್ರದೇಶಗಳಲ್ಲಿ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನ ಈ ಭಾಗದಲ್ಲಿ ಗುಡುಗು ಸಹಿತ ಸಾಧರಣ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ. ಕೇರಳದ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ.