ಸುಳ್ಯ:ಪ್ರಕೃತಿಯಲ್ಲಿರುವ ಪ್ರತಿಯೊಂದು ಸೂಕ್ಷ್ಮಾಣು ಜೀವಿಗಳು ಪರಿಸರವನ್ನು ಸ್ವಚ್ಛಂದಗೊಳಿಸಲು ಸಾಧ್ಯವಾಗುವುದಾದರೆ ಮನುಷ್ಯನಿಗೆ ಯಾಕಾಗಬಾರದು. ಅದಕ್ಕಾಗಿ ಪ್ರತಿಯೊಬ್ಬ ಮಾನವನು ಚಿಂತಿಸಿ ಅದನ್ನು ಉಳಿಸಿದಲ್ಲಿ ಮಾತ್ರ ಮುಂದಿನ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಪ್ರಕೃತಿಯನ್ನು ಪ್ರೀತಿಸಿದರೆ ಮಾತ್ರ ಅದು ನಮ್ಮನ್ನು ಕಾಪಾಡುತ್ತದೆ ಅದಕ್ಕಾಗಿ ವಿದ್ಯಾರ್ಥಿಗಳು ಅದನ್ನು ಪ್ರೀತಿಸಿ ಎಂದು ಪರಿಸರ ತಜ್ಞ ಹಾಗೂ
ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅಭಿಪ್ರಾಯಪಟ್ಟರು.
ಅವರು ಸುಳ್ಯ ಸ.ಪ.ಪೂ.ಕಾಲೇಜಿನ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಕೋ ಕ್ಲಬ್ ನ ಸಹಯೋಗದಲ್ಲಿ ನಡೆದ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಸರಣಿ ಕಾರ್ಯಕ್ರಮ ಗಳನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಕ್ಷೇತ್ರಕ್ಕೆ ವಿಷ ಬರೆಸುವ ಕೆಲಸ ಮಾಡಬೇಡಿ. ಪ್ರಕೃತಿ ಮುನಿಸಿಕೊಂಡರೆ ಆ ದುರಂತವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲವೆಂಬುದು ಇತ್ತೀಚೆಗಿನ ಪ್ರಕರಣವೇ ಸಾಕ್ಷಿ. ಪ್ರಕೃತಿಯ ವಿರುದ್ಧ ಹೋಗಿ ಬೇಕುಂತಲೇ ವಿಕೋಪಗಳನ್ನು ತರಿಸಿಕೊಳ್ಳುತ್ತೇವೆ ಎಂದ ಅವರು ಸಣ್ಣ ಗಾತ್ರದ ಇರುವೆ ಯನ್ನು ಸಂರಕ್ಷಣೆಯನ್ನು ಮಾಡಿದರೆ ಆನೆಯನ್ನು ಸಂರಕ್ಷಣೆ ಮಾಡಿದಂತೆ, ಅದರಂತೆ ಗಿಡಗಳನ್ನು ರಕ್ಷಣೆ ಮಾಡಿ ಮರಗಳು ಅದರಷ್ಟಕ್ಕೆ ಉಳಿಯುತ್ತದೆ. ಪ್ರಕೃತಿ ಸಂರಕ್ಷಣೆಗೆ ನಮ್ಮ ಭಾವನೆ ಮುಖ್ಯ ಎಂದು ಹೇಳಿದರು.
ಅತಿಥಿಯಾಗಿ ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಶುಭ ಹಾರೈಸಿದರು. ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಹಿರಿಯ ಶಿಕ್ಷಕ ಡಾ.ಸುಂದರ್ ಕೇನಾಜೆ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ, ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ತಾಲೂಕು ಘಟಕದ ಗೌರವ ಕೋಶಾಧಿಕಾರಿ ದಯಾನಂದ ಆಳ್ವ, ಇಕೋ ಕ್ಲಬ್ನ ಸಂಚಾಲಕಿ ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ.ಆರ್.ಕೆ.ನಾಯರ್ ಮತ್ತು ಎನ್.ಮಂಜುನಾಥ ಅವರನ್ನು ಗೌರವಿಸಲಾಯಿತು.
ಗಾಯಕಿಯರಾದ ಶುಭದಾ ಆರ್.ಪ್ರಕಾಶ್ ಮತ್ತು ಲಿಪಿಶ್ರೀ ಪರಿಸರ ಗೀತೆ ಗಾಯನ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ. ರಾಮಚಂದ್ರ ಪಲ್ಲತ್ತಡ್ಕ ಸ್ವಾಗತಿಸಿ, ಪೂರ್ಣಿಮ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ನಿರ್ದೇಕರಾದ ಕೇಶವ ಸಿ.ಎ.,ರಮೇಶ್ ನೀರಬಿದಿರೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.














