ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ಕಾಲೇಜಿನ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಕೆ.ವಿ.ಜಿ ಷಷ್ಟಬ್ಬ ರಂಗ ಮಂದಿರದಲ್ಲಿ ಫೆ.24 ರಂದು ನಡೆಯಲಿದೆ.ರಾಷ್ಟ್ರೀಯ ವಿಚಾರ ಸಂಕಿರಣವನ್ನು
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎ.ಓಎಲ್.ಇಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ರುದ್ರಕುಮಾರ್, ಪಿಯು ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ರೈ ಪಿ.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಇವರು ವಹಿಸಲಿದ್ದಾರೆ.
ಪ್ರಥಮ ಅಧಿವೇಶನದ ಭಾಷಾ ವಿಚಾರ ಸಂಕಿರಣದಲ್ಲಿ “ಪ್ರಾದೇಶಿಕ ಭಾಷೆಗಳು ಎದುರಿಸುತ್ತಿರುವ ಸವಾಲುಗಳು” ಎಂಬ ವಿಷಯದ ಬಗ್ಗೆ ಡಾ. ಧನಂಜಯ ಕುಂಬ್ಳೆ ಹಾಗೂ “ಜಾಗತೀಕರಣ ಮತ್ತು ಸಾಂಸ್ಕೃತಿಕ ಪಲ್ಲಟಗಳು” ಎಂಬ ವಿಷಯದ ಬಗ್ಗೆ ಡಾ. ನರೇಂದ್ರ ರೈ ದೇರ್ಲ ಇವರು ಪ್ರಬಂಧ ಮಂಡಿಸಲಿದ್ದಾರೆ. ಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರು ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ವಹಿಸಿ ಮಾತನಾಡಲಿದ್ದಾರೆ.
ದ್ವಿತೀಯ ಆಧಿವೇಶನದಲ್ಲಿ ಅರೆಭಾಷೆ ವಿಚಾರ ಸಂಕಿರಣ ನಡೆಯಲಿದೆ. “ಅರೆಭಾಷನ ಅನನ್ಯತೆಗ” ಎಂಬ ವಿಷಯದ ಬಗ್ಗೆ ಕೆ.ಆರ್. ಗಂಗಾಧರ ಹಾಗೂ ‘ಅರೆಭಾಷೆಯ ಪ್ರಾದೇಶಿಕ ವಿಭಿನ್ನತೆಗ’ ಎಂಬ ವಿಷಯದ ಕುರಿತು ಡಾ. ಪುರುಷೋತ್ತಮ ಕರಂಗಲ್ಲು ಮಾತನಾಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಚಿಂತಕರು ಹಾಗೂ ಸಾಹಿತಿಗಳಾದ ಪ್ರೊ. ರಾಧಾಕೃಷ್ಣ ಬೆಂಗಳೂರು ಇವರು ವಹಿಸಲಿದ್ದಾರೆ.
ಮಧ್ಯಾಹ್ನ ಭೋಜನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಭೋಜನ ನಂತರದ ಅವಧಿಯಲ್ಲಿ ಅರೆಭಾಷೆ ಸಂಸ್ಕೃತಿ ವಿಚಾರ ಸಂಕಿರಣ ನಡೆಯಲಿದೆ. “ಅರೆಭಾಷೆನ ಮೊಧ್ವೆ ಪದ್ಧತಿಗಳ ಬದಲಾವಣೆಗ” ಎಂಬ ವಿಷಯದ ಕುರಿತು ದೊಡ್ಡಣ ಬರೆಮೇಲು, “ಸಿದ್ಧವೇಶ-ಅರೆಭಾಷಿಕರ ಜಾನಪದ ನೃತ್ಯ,” ಎಂಬ ವಿಷಯದ ಬಗ್ಗೆ ಜಯಪ್ರಕಾಶ ಕುಕ್ಕೆಟ್ಟಿ, “ಅರೆಭಾಷಿಕರ
ದೈವರಾಧಾನೆ” ಬಗ್ಗೆ ಡಾ. ಕರುಣಾಕರ ನಿಡಿಂಜಿ ಹಾಗೂ “ಕೊಡಗಿನ ಅರೆಭಾಷಿಕರ ಹಬ್ಬ ಹರಿದಿನ” ಗಳ ಬಗ್ಗೆ ಡಾ. ದಯಾನಂದ ಕೂಡಕಂಡಿ ಉಪನ್ಯಾಸ ನೀಡಲಿದ್ದಾರೆ. ಗೋಷಿಯ ಅಧ್ಯಕ್ಷತೆಯನ್ನು ಖ್ಯಾತ ವಾಗ್ಮಿ ಪಟ್ಟಡ ಶಿವಕುಮಾರ್ ವಹಿಸಲಿದ್ದಾರೆ ಈ ಕಾರ್ಯಕ್ರಮದಲ್ಲಿ ಸಾಹಿತಿಗಳು, ಚಿಂತಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













