ಮಂಗಳೂರು: ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮ ಎರಡನೇ ಹಂತದಲ್ಲಿ ಸೆಪ್ಟೆಂಬರ್ 11 ರಿಂದ 16 ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಸಿ.ಹೆಚ್. ಅಧಿಕಾರಿ ಡಾ. ರಾಜೇಶ್ ಅವರು ತಿಳಿಸಿದ್ದಾರೆ.ಅವರು ಸೆ.8ರ ಶುಕ್ರವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಕಾರ್ಯಕ್ರಮವು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ
ಮುಂದುವರಿದ ಭಾಗವಾಗಿದ್ದು, ಇದರಲ್ಲಿ ಅಗತ್ಯವಿರುವ ರೋಗ ನಿರೋಧಕ ಚುಚ್ಚುಮದ್ದಿನಿಂದ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಲಸಿಕೆಯಿಂದ ವಂಚಿತರಾದ ಗರ್ಭಿಣಿಯರು ಹಾಗೂ 0-5 ವರ್ಷದ ಒಳಗಿನ ಮಕ್ಕಳನ್ನು ಗುರುತಿಸಿ ಈ ಹಂತದಲ್ಲಿ ಫಲಾನುಭವಿಗಳಿಗೆ ಪೂರ್ಣ ಮತ್ತು ಸಂಪೂರ್ಣ ಲಸಿಕೆ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ನಿರ್ದಿಷ್ಟವಾಗಿ ಕ್ರಿಯಾ ಯೋಜನೆಯಲ್ಲಿ ಗುರುತಿಸುವ ಸ್ಥಳಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಸಲಾಗುತ್ತಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಉತ್ತಮಪಡಿಸುವುದರೊಂದಿಗೆ ಶೇಕಡ 95ಕ್ಕಿಂತ ಹೆಚ್ಚು ಪೂರ್ಣ ಲಸಿಕೆ ಪಡೆಯುವ ಮುಖ್ಯ ಉದ್ದೇಶದೊಂದಿಗೆ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಜಿಲ್ಲೆಯಲ್ಲಿ ಇನ್ನು ಎರಡನೇ ಹಂತದಲ್ಲಿ ಸೆಪ್ಟೆಂಬರ್ 11 ರಿಂದ 16 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಬಾರಿ 5,158 ಮಕ್ಕಳು ಹಾಗೂ 1,036 ಗರ್ಭಿಣಿಯರನ್ನು ಲಸಿಕೆಗೆ ಗುರುತಿಸಲಾಗಿದೆ. ಈ ಲಸಿಕೆಯನ್ನು ಜಿಲ್ಲೆಯಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ನಮ್ಮ ಕ್ಲಿನಿಕ್ಗಳಲ್ಲಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಲೇಡಿಗೋಷನ್ ಆಸ್ಪತ್ರೆಯಲ್ಲಯೂ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ಈ ಲಸಿಕೆಯ ಪಡೆದ ಬಳಿಕ 5 ಗಂಟೆಗಳ ಕಾಲ ನಿಘಾ ವಹಿಸಬೇಕಾಗಿದ್ದು, ಸಾಧ್ಯವಾದರೆ ಎಲ್ಲರೂ ಬೆಳಿಗ್ಗೆಯೇ ಲಸಿಕೆ ಪಡೆಯಲು ಸೂಚಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ. ಇಂದುಮತಿ ಎಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮೈಸೂರು ವಿಭಾಗಿಯ ಸಹ ನಿರ್ದೇಶಕಿಯಾದ ಡಾ. ಎಚ್. ಆರ್. ರಾಜೇಶ್ವರೀ ದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುದರ್ಶನ್, ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ. ಸದಾಶಿವ ಶಾನುಭೋಗ್ , ಲೇಡಿ ಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾ ಪ್ರಸಾದ್ ಎಂ.ಆರ್ ಉಪಸ್ಥಿತರಿದ್ದರು.