ಜರುಸಲೇಂ: ಇಸ್ರೇಲ್ ಮತ್ತು ಹಮಾಸ್ ಸಂಘರ್ಷ ಮುಂದುವರಿದಿದ್ದು ವೈಮಾನಿಕ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ಇದುವರೆಗೂ 400ಕ್ಕೂ ಹೆಚ್ಚು ಜನ ಪ್ರಾಣ ಬಿಟ್ಟಿದ್ದಾರೆ. ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ಗಳನ್ನು ಉಡಾಯಿಸಿ ದೇಶದೊಳಗೆ ನುಸುಳಿ
ವಿಧ್ವಂಸಕ ಕೃತ್ಯ ಎಸಗಿದ್ದರು. ಇದಕ್ಕೆ ಇಸ್ರೇಲ್ ಉತ್ತರ ನೀಡಿ ವೈಮಾನಿಕ ದಾಳಿ ನಡೆಸಿತು.
ಇದರಿಂದ ಎರಡೂ ಕಡೆ ಭಾರೀ ಪ್ರಾಣಹಾನಿ ಸಂಭವಿಸಿದೆ. ಹಮಾಸ್ ದಾಳಿಯಲ್ಲಿ ಇನ್ನೂರು ಜನರು ಪ್ರಾಣ ಕಳೆದುಕೊಂಡರೆ, ಗಾಜಾ ಪಟ್ಟಿಯಲ್ಲಿ ಸಾವಿನ ಸಂಖ್ಯೆ 230 ಮೀರಿದೆ. ಒಟ್ಟು 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 2 ಸಾವಿರಕ್ಕೂ ಹೆಚ್ಚು ಸ್ಥಳೀಯರು ಗಾಯಗೊಂಡಿದ್ದಾರೆ. ಇಸ್ರೇಲ್ನ ಹಲವು ಪ್ರದೇಶಗಳಿಗೆ ಭಯೋತ್ಪಾದಕರು ನುಗ್ಗಿದ್ದಾರೆ ಎಂದು ವರದಿಯಾಗಿದೆ. ತನ್ನ ದೇಶದ ಮೇಲೆ ಯುದ್ಧ ಸಾರುವ ಶತ್ರುಗಳು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಇಸ್ರೇಲ್ ಮತ್ತು ಪ್ಯಾಲಸ್ತೀನ್ನಲ್ಲಿರುವ ಭಾರತೀಯರು ಜಾಗೃತಿ ವಹಿಸುವಂತೆ ಭಾರತ ಸೂಚಿಸಿದೆ.