ಸುಳ್ಯ: ಗುತ್ತಿಗಾರಿನ ಬಂಟಮಲೆ ಅಕಾಡೆಮಿ ನೀಡುವ ಈ ಬಾರಿಯ ಬಂಟಮಲೆ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಕಲ್ಲೆ ಶಿವೋತ್ತಮ ರಾವ್ ಅವರಿಗೆ ನೀಡಲಾಗುವುದು. ಮಾ.9 ರಂದು ಮಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಂಟಮಲೆ ಅಕಾಡೆಮಿಯ ಕಾರ್ಯದರ್ಶಿ ಎ.ಕೆ.ಹಿಮಕರ ತಿಳಿಸಿದ್ದಾರೆ. ಸುಳ್ಯ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಾ.9ರಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಸಂಜೆ ಪಾರ್ವತೀಶ ಬಿಳಿದಾಳೆ ಇವರ ‘ಕಲ್ಲೆ ಶಿವೋತ್ತಮ ರಾವ್ – ಜನಪ್ರಗತಿಯ ಪಂಜು’ ಕೃತಿ ಬಿಡುಗಡೆ ಸಮಾರಂಭದಲ್ಲಿ
ಕನ್ನಡ ಪ್ರತಿಕೋದ್ಯಮದ ಹಿರಿಯರಾದ ಕಾರ್ಕಳದ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಬಂಟಮಲೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯನ್ನು ಶಿಕ್ಷಣ ತಜ್ಞ ಡಾ. ಎನ್. ಸುಕುಮಾರ್ ಗೌಡ ಪ್ರದಾನ ಮಾಡುವರು.95ರ ಹರೆಯದ ಕಲ್ಲೆ ಶಿವೋತ್ತಮ ರಾವ್ ಅವರು
1950ರ ದಶಕದಿಂದ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಸಕ್ರೀಯವಾಗಿ ದುಡಿದವರು. ಜಯಹಿಂದ್, ರಾಷ್ಟ್ರ ಬಂಧು, ರಾಷ್ಟ್ರಮತ, ವಿಶಾಲ ಕರ್ನಾಟಕ, ಸ್ವರಾಜ್, ಜನಪದ, ಜನಪ್ರಗತಿ ಹಾಗೂ ಪ್ರಜಾವಾಣಿಗಳಲ್ಲಿ ದುಡಿದ ಅವರಿಗೆ 4ನೇ ಬಂಟಮಲೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಲ್ಲೆ ಶಿವೋತ್ತಮ ರಾವ್
ಪತ್ರಕರ್ತ ಪಾರ್ವತೀಶ ಬಿಳಿದಾಳೆ, ಕೆ.ಆರ್. ತೇಜಕುಮಾರ್, ಎ.ಕೆ.ಹಿಮಕರ, ಕೆ.ಆರ್.ವಿದ್ಯಾಧರ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಪ್ರಶಸ್ತಿಗೆ ಕಲ್ಲೆ ಶಿವೋತ್ತಮ ರಾವ್ ಅವರನ್ನು ಆಯ್ಕೆ ಮಾಡಿದೆ. ಬಂಟಮಲೆ ಅಕಾಡೆಮಿಯಿಂದ ಪ್ರಥಮ ಪ್ರಶಸ್ತಿಯನ್ನು ಎ.ಕೆ.ಸುಬ್ಬಯ್ಯ, ಎರಡನೇ ಬಾರಿ ಶಿಕ್ಷಣ ತಜ್ಞ ಡಾ. ಸುಕುಮಾರ್ ಗೌಡ, ಮೂರನೇ ಬಾರಿ ಸಾಹಿತಿ ದೇವಿಪ್ರಸಾದ್ ಸಂಪಾಜೆ ಅವರಿಗೆ ಬಂಟಮಲೆ ಪ್ರಶಸ್ತಿ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು.
‘ಜನಪ್ರಗತಿ’ ವಾರಪತ್ರಿಕೆಯ ಸಂಪಾದಕರಾಗಿ ಕರ್ನಾಟಕದ ಸಾಮಾಜಿಕ ಬದುಕನ್ನು ಬಹಳ ಪರಿಣಾಮಕಾರಿಯಾಗಿ ಪ್ರಭಾವಿಸಿದ ಪತ್ರಕರ್ತ ಎಂಬ ಹೆಗ್ಗಳಿಕೆ ಕಲ್ಲೆ ಅವರದ್ದು.ಕನ್ನಡ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಕಲ್ಲೆ ಶಿವೋತ್ತಮರಾಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬಂಟಮಲೆ ಅಕಾಡೆಮಿಯ ಅಧ್ಯಕ್ಷ ಕೆ.ಆರ್.ತೇಜಕುಮಾರ್ ಬಡ್ಡಡ್ಕ, ಸದಸ್ಯರಾದ ಗೋಪಾಲಕೃಷ್ಣ ಪರ್ಲುಮಕ್ಕಿ, ಭರತ್ ಕುಮಾರ್ ಐವರ್ನಾಡು, ಉಪನ್ಯಾಸಕ ಸಂಜೀವ ಕುದ್ಪಾಜೆ ಉಪಸ್ಥಿತರಿದ್ದರು.