ಸುಳ್ಯ:ಕಲೆಯ ಮೂಲಕ ಸೋಣಂಗೇರಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದ ಹಿರಿಯ ಕಲಾವಿದರಾಗಿದ್ದ ಮೋಹನ್ ಸೋನ ಅವರ ಹೆಸರನ್ನು ಸೋಣಂಗೇರಿ ವೃತ್ತಕ್ಕೆ ಇರಿಸುವಂತೆ ಮೋಹನ್ ಸೋನ ಅಭಿಮಾನಿ ಬಳಗ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಲಾವಿದ ಸುದೇಶ್ ಮಹಾನ್ ‘ ತಮ್ಮ ಅದ್ಭುತ ಚಿತ್ರಕಲೆಯ ಮೂಲಕ ಹಾಗೂ ಬಯಲು ಚಿತ್ರಾಲಯದಿಂದ ಸೋಣಂಗೇರಿಯ
ಹೆಸರನ್ನು ದೇಶದಾದ್ಯಂತ ಪಸರಿಸಿದವರು ಮೋಹನ್ ಸೋನ. ಸೋಣಂಗೇರಿಯನ್ನು ರಾಷ್ಟ್ರೀಯ ಸಾಂಸ್ಕೃತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸೋನ ಅವರು ಸೋಣಂಗೇರಿಯನ್ನು ಕಲಾ ಕೇಂದ್ರವಾಗಿ ಬೆಳೆಸಿದವರು. ಅವರ ಪ್ರೇರಣೆಯಿಂದ ಹಲವಾರು ಕಲಾವಿದರು ಬೆಳೆದಿದ್ದಾರೆ. ಇಲ್ಲಿನ ಸೋಣಂಗೇರಿಯ ವೃತ್ತದಲ್ಲಿ ಒಂದು ಆಕರ್ಷಕ ಶಿಲ್ಪವನ್ನು ರಚಿಸಿ ವೃತ್ತಕ್ಕೆ ಮೋಹನ್ ಸೋನ ಅವರ ಹೆಸರನ್ನು ಇರಿಸಬೇಕು. ಅದಕ್ಕಾಗಿ ಆಕರ್ಷಕ ಕಲಾತ್ಮಕ ವಿನ್ಯಾಸ ಮಾಡಿ ಕೊಡಲು ಸಿದ್ಧರಿದ್ದೇವೆ ಎಂದು ಹೇಳಿದರು.
ಸಾಮಾಜಿಕ ಹೊರಾಟಗಾರ ಸತ್ಯಶಾಂತಿ ತ್ಯಾಗಮೂರ್ತಿ ಮಾತನಾಡಿ ಕಲೆಯ ಊರಾದ ಸೋಣಂಗೇರಿಯ ವೃತ್ತಕ್ಕೆ ಕಲಾವಿದರಾಗಿದ್ದ ಮೋಹನ್ ಸೋನ ಅವರ ಹೆಸರನ್ನು ಇರಿಸಬೇಕು.ವೃತ್ತಕ್ಕೆ ಅವರ ಹೆಸರಿಡಬೇಕು ಎಂದು ಗ್ರಾಮ ಪಂಚಾಯತ್ನಿಂದ ಹಿಡಿದು ಸಚಿವಾಲಯದವರೆಗೆ ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಜನಾಭಿಪ್ರಾಯ ಸಂಗ್ರಹ ಮಾಡಿ ಹೆಸರು ಇರಿಸಲಿ ಎಂದ ಅವರು ಸೋಣಂಗೇರಿ ವೃತ್ತಕ್ಕೆ ಕಲೆ ಸಂಬಂಧಿತ ಶಿಲ್ಪ ಬರಬೇಕು ಎಂದು ಒತ್ತಾಯಿಸಿದರು.
![](https://thesulliamirror.com/wp-content/uploads/2023/10/IMG_20231014_151242.jpg)
ಮೋಹನ್ ಸೋನ ಅವರ ಪುತ್ರಿ ಮೃಣಾಲಿನಿ ಸೋನ ಮಾತನಾಡಿ ‘ಕಲೆಯ ಬೆಳವಣಿಗೆಗೆ ಪೂರಕವಾಗಿ ಕಲಾ ಸೇವೆಯನ್ನು ಮುಂದುವರಿಸುವ ಯೋಚನೆ ಇದೆ.ಕಲಾವಿದರನ್ನು ಒಟ್ಟು ಸೇರಿಸಿ ಮತ್ತೊಮ್ಮೆ ಬಯಲು ಚಿತ್ರಾಲಯಯವನ್ನು ಮಾಡುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು. ಆರ್ಟ್ ಗ್ಯಾಲರಿಯನ್ನು ರಚಿಸಲಾಗಿದೆ. ಚಿತ್ರಕಲೆಗಳ ಸಂರಕ್ಷಣೆಗೆ, ಕಲೆಗಳ ಪ್ರೋತ್ಸಾಹಕ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇರಾದೆ ಇದೆ.ಸುಳ್ಯದಲ್ಲಿ ಕಲೆಯನ್ನೂ, ಕಲಾವಿದರನ್ನು ಪ್ರೋತ್ಸಾಹಿಸುವ ಜನರಿದ್ದಾರೆ. ಇಲ್ಲಿ ಕಲಾ ಸಾಂಸ್ಕೃತಿಕತೆ ಜೀವಂತವಾಗಿದೆ ಎಂದು ಮೃಣಾಲಿನಿ ಸೋನ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ಸೋನ ಅವರ ಪುತ್ರ ಗಗನ್ ಸೋನ, ನಂದನ್ ಸೋನ, ವಿಜಿತ್ ಶೆಟ್ಟಿ ಉಪಸ್ಥಿತರಿದ್ದರು.