*ಚಂದ್ರಾವತಿ ಬಡ್ಡಡ್ಕ.
ಫೈನಲೀ ಸುಳ್ಯ ಕ್ಷೇತ್ರದ ಚುನಾವಣಾ ಸ್ಫರ್ಧಾಳುಗಳ ಸ್ಪಷ್ಟ ಚಿತ್ರಣ ಲಭ್ಯವಾಗಿದೆ. ನಾಮಪತ್ರ ಸಲ್ಲಿಕೆಯ ಅವಧಿ ಮುಗಿದಿದ್ದು ಉಮೇದುವಾರರೆಲ್ಲ ನಾಮಪತ್ರ ಸಲ್ಲಿಸಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ಎಲ್ಲವೂ – ಎಲ್ಲರೂ ಕೂಲ್ ಕೂಲ್. ಪಕ್ಷನಿಷ್ಠೆ, ಕಾರ್ಯನಿಷ್ಠೆ ಎದ್ದು ಕಾಣುತ್ತಿದೆ. ಇನ್ನು ಎರಡೇ ವಾರದಲ್ಲಿ ಉಮೇದುವಾರರ ಅದೃಷ್ಟ ಪರೀಕ್ಷೆ ನಡೆಯಲಿದ್ದು ಅಲ್ಲೀತನಕ ಮತದಾರರನ್ನು ಒಲಿಸುವ, ಪ್ರಚಾರದ ಅಬ್ಬರವನ್ನು ನಾವಿನ್ನು ನೋಡಲಿದ್ದೇವೆ.
ಸುಳ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸಲು ಈ ಸರ್ತಿ ಇಬ್ಬರು ಮಹಿಳಾ ಅಭ್ಯರ್ಧಿಗಳು ಸೇರಿದಂತೆ ಒಟ್ಟು ಒಂಬತ್ತು ಅಭ್ಯರ್ಥಿಗಳು ತಮ್ಮ
ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ನಿಂದ ಜಿ.ಕೃಷ್ಣಪ್ಪ, ಆಮ್ ಆದ್ಮಿ ಪಕ್ಷದಿಂದ ಸುಮನಾ ಬೆಳ್ಳಾರ್ಕರ್, ಜೆಡಿಎಸ್ನಿಂದ ಎಚ್.ಎಲ್. ವೆಂಕಟೇಶ್, ಪ್ರಜಾಕೀಯ ಪಕ್ಷದಿಂದ ರಮೇಶ್ ಬಿ, ಕಲ್ಯಾಣ ರಾಜ್ ಪ್ರಗತಿ ಪಕ್ಷದಿಂದ ಸುಂದರ ಮೇರ, ಕರ್ನಾಟರ ರಾಷ್ಟ್ರ ಸಮಿತಿ ಪಕ್ಷದಿಂದ ಗಣೇಶ್ ಎಂ ಹಾಗೂ ಪಕ್ಷೇತರರಾಗಿ ಸತೀಶ್ ಬೂಡುಮಕ್ಕಿ, ಗುರುವಪ್ಪ ಕಲ್ಲುಗುಡ್ಡೆ ಇವರುಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂತೆಗೆಯಲು ಏಪ್ರಿಲ್ 24 ಕೊನೆಯ ಗಡುವಾಗಿದ್ದು ಇಲ್ಲಿ ಯಾವುದೇ ನಾಮಪತ್ರ ಹಿಂತೆಗೆತದ ಸಂಭವ ಕಮ್ಮಿ ಎಂದೇ ತೋರುತ್ತದೆ.
ಕಾಂಗ್ರೆಸ್ನಿಂದ ಸ್ಪರ್ಧೆ ಬಯಸಿದ್ದು ಟಿಕೆಟ್ ಸಿಗದೆ ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದ ನಂದಕುಮಾರ್ ಅವರನ್ನು ಪಕ್ಷದ ವರಿಷ್ಠರು ಸಮಾಧಾನಿಸಿ ಅವರ ಬಂಡಾಯವನ್ನು ತಣ್ಣಗಾಗಿಸಿದ್ದಾರೆ. ಕೆಪಿಸಿಸಿ ಸಂಯೋಜಕರಾಗಿರುವ ಅವರಿಗೆ ಕೊಡಗು ಜಿಲ್ಲಾ ಚುನಾವಣಾ ಉಸ್ತುವಾರಿಯನ್ನು ನೀಡಲಾಗಿದೆ. ಕೊಡಗಿನ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ವಿವಿಧ ಘಟಕಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ನಿಗಮ ಮಂಡಳಿಯ ಅಧ್ಯಕ್ಷತೆ ಅವರಿಗೆ ಒಲಿದೀತು. ಹಾಗಾಗಿ ಈ ಮೊದಲಿದ್ದ ಕಾಂಗ್ರೆಸ್ ಮತಗಳು ಒಡೆದು ಹೋದಾವು ಎಂಬ ದೊಡ್ಡ ಆತಂಕ ಈಗ ಸ್ವಲ್ಪ ದೂರವಾಗಿದೆ.
ಬಿಜೆಪಿಯಲ್ಲಿ ಟಿಕೆಟ್ ಘೋಷಣೆಯಾದ ಕ್ಷಣದಲ್ಲಿ, ಹಾಲಿ ಶಾಸಕರಾಗಿರುವ ಎಸ್. ಅಂಗಾರರವರು ಬೇಸರ ವ್ಯಕ್ತಪಡಿಸಿದ್ದರು. ತಾನು ಸಕ್ರಿಯ ರಾಜಕಾರಣದಿಂದ ದೂರಸರಿಯುವ ಮಾತುಗಳನ್ನು ಆಡಿದ್ದರು. ಆದರೆ ನಂತರದಲ್ಲಿ ತಕ್ಷಣವೇ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ ಮಾತ್ರವಲ್ಲದೆ ಅದರಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಎರಡೂ ಪಕ್ಷಗಳೊಳಗಿನ ಅಸಮಾಧಾನದ ಕಾವು ತಣ್ಣಗಾಗಿದ್ದು ಒಗ್ಗಟ್ಟು ಮೂಡಿದೆ ಮತ್ತು ತಮ್ಮತಮ್ಮ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಟೊಂಕಕಟ್ಟಿದ್ದಾರೆ.
ಇದೇ ಪ್ರಥಮವಾಗಿ ಸುಳ್ಯ ಕ್ಷೇತ್ರದಲ್ಲಿ ಆಖಾಡಕ್ಕಿಳಿದಿರುವ ಆಮ್ ಆದ್ಮಿ ಪಕ್ಷವು ಆರಂಭದಿಂದಲೇ ಯಾವುದೇ ಗೊಂದಲಗಳಿಲ್ಲದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು ತನ್ನ ಪ್ರಚಾರದ ಬಿರುಸನ್ನು ಹೆಚ್ಚಿಸಿಕೊಂಡಿದೆ. ಅಂತೆಯೇ ಇದೇ ಮೊದಲಾಗಿ ಪ್ರಜಾಕೀಯ ಪಕ್ಷವೂ ಖಾತೆ ತೆರೆಯಲು ಮುಂದಾಗಿದ್ದು ಅದೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಹಿಂದೆ 1983ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಎಲ್. ವೆಂಕಟೇಶ್ ಅವರು ಇದೀಗ ಮತ್ತೆ ಬರೊಬ್ಬರಿ 40 ವರ್ಷಗಳ ನಂತರ ಜೆಡಿಎಸ್ನಿಂದ ಸ್ಪರ್ಧಿಸುತ್ತಿದ್ದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರೊಂದಿಗೆ ಕಲ್ಯಾಣ ರಾಜ್ ಪ್ರಗತಿ ಪಕ್ಷ ಮತ್ತು ಕರ್ನಾಟರ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳು ಮತ್ತು ಪಕ್ಷೇತರರಿಬ್ಬರು ರೇಸ್ನಲ್ಲಿದ್ದಾರೆ. ಜಯಮಾಲೆ ಯಾರಿಗೆ ಒಲಿದೀತು ಎಂಬುದು ಸದ್ಯದ ಕುತೂಹಲ.
ಸುಳ್ಯ ಕ್ಷೇತ್ರದಲ್ಲಿ ಗೋಚರವಾಗುವುದು ನೇರ ಸ್ಪರ್ಧೆಯೇ. ಸುಳ್ಯಕ್ಕೆ ಬದಲಾವಣೆ ಬೇಕಿದೆ ಎಂಬ ಕೂಗು ಕೇಳಿಬಂದಿತ್ತು. ಕಾಂಗ್ರೆಸ್ ಅಥವಾ ಬಿಜೆಪಿಗಳೆರಡೂ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಹಾಗಾಗಿ ಬದಲಾವಣೆಯಂತೂ ಖಚಿತ. ಒಂದೊಮ್ಮೆ ಕಾಂಗ್ರೆಸ್ ಗೆದ್ದರೆ ಮೂವತ್ತು ವರ್ಷಗಳ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಬೀಳುತ್ತದೆ. ಬಿಜೆಪಿಗೆ ವಿಜಯಲಕ್ಷ್ಮಿ ಮತ್ತೊಮ್ಮೆ ಒಲಿದರೆ ಸುಳ್ಯದ ಪ್ರಥಮ ಮಹಿಳಾ ಶಾಸಕಿ ಎಂಬ ದಾಖಲೆ ನಿರ್ಮಾಣವಾಗುತ್ತದೆ.
![](https://thesulliamirror.com/wp-content/uploads/2023/04/IMG_20230422_004050.jpg)
ಯಂಕಪ್ಪ
ಮಿಣುಕು: ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಯಂಕಪ್ಪ ದೇವೀಂದ್ರಪ್ಪ ರಾಮಸಮುದ್ರ ಎಂಬವರು ನಾಮಪತ್ರ ಸಲ್ಲಿಸುವ ವೇಳೆ ಇಡಬೇಕಿರುವ ಹತ್ತುಸಾವಿರ ರೂಪಾಯಿ ಠೇವಣಿಯನ್ನು ಒಂದು ರೂಪಾಯಿ ನಾಣ್ಯಗಳಲ್ಲೇ ಸಲ್ಲಿಸಿದ್ದಾರೆ. ಅವರು ಚುನಾವಣೆಗೆ ಒಂದು ವರ್ಷ ಇರುತ್ತಲೇ ಕೊರಳಿಗೆಗೊಂದು ಪೋಸ್ಟರ್ ಹಾಕಿಕೊಂಡು ಯಾದಗಿರಿ ವಿಧಾನಸಭಾ ಕ್ಷೇತ್ರದ 10 ಸಾವಿರ ಮನೆಗಳಲ್ಲಿ ತಲಾ ಒಂದು ರೂಪಾಯಿ ಭಿಕ್ಷೆ ಬೇಡಿ, ಹತ್ತು ಸಾವಿರ ರೂಪಾಯಿ ಸಂಗ್ರಹಿಸಿದ್ದಾರೆ. ಹೆಚ್ಚು ಹಣ ಕೊಟ್ಟರೆ ಸ್ವೀಕರಿಸುತ್ತಿರಲಿಲ್ಲವಂತೆ. ಯಾವುದೇ ಗ್ರಾಮದಲ್ಲಿ ವಾಸ್ತವ್ಯ ಹೂಡಬೇಕಿದ್ದರೂ ಅಲ್ಲಿನ ದೇವಸ್ಥಾನಗಳನ್ನು ಅವಲಂಭಿಸುತ್ತಿದ್ದು, ಊರಿನ ಮನೆಗಳಲ್ಲಿ ಭಿಕ್ಷೆ ಬೇಡಿ ಊಟ ಮಾಡುತ್ತಿದ್ದರಂತೆ.
ಮೈಸೂರು ವಿಶ್ವವಿದ್ಯಾನಿಲಯದ ಎಂಎ ವಿದ್ಯಾರ್ಥಿಯಾಗಿರುವ ಇವರು ಬಸವಣ್ಣ, ಕನಕದಾಸರು, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರಗಳು ಮತ್ತು ಸಂವಿಧಾನದ ಪೀಠಿಕೆಯ ಪೊಸ್ಟರನ್ನು ತಮ್ಮ ಕೊರಳಿಗೆ ನೇತಾಕೊಂಡು ಊರೂರು ಸುತ್ತಾಡಿ ಹಣ ಸಂಗ್ರಹಿಸಿದ್ದಾರೆ. “ನಿಮ್ಮ ಒಂದು ಮತ ನೀಡಿ, ನಾನು ನಿಮಗೆ ಬಡತನದಿಂದ ಮುಕ್ತಿ ನೀಡುತ್ತೇನೆ” ಎಂಬುದು ಇವರ ಘೋಷವಾಕ್ಯ.ಅದೇನೇ ಇರಲಿ ಇವರು ಸಲ್ಲಿಸಿರುವ ಹತ್ತುಸಾವಿರ ರೂಪಾಯಿ ಚಿಲ್ಲರೆ ನಾಣ್ಯವನ್ನು ಎಣಿಸುವಲ್ಲಿ ಚುನಾವಣಾಧಿಕಾರಿ ಕಚೇರಿಯ ಸಿಬ್ಬಂದಿಗಳು ಮಾತ್ರ ಸುಸ್ತು ಹೊಡೆದರಂತೆ!
![](https://thesulliamirror.com/wp-content/uploads/2023/04/IMG_20221003_005112.jpg)
ಚಂದ್ರಾವತಿ ಬಡ್ಡಡ್ಕ.
(ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು)