ಉಳ್ಳಾಲ: ಪತ್ರಕರ್ತರ ಕರ್ತವ್ಯ ನಿಭಾಯಿಸುವುದರ ಜೊತೆಗೆ ಜನರ ಕಾಳಜಿ ವಹಿಸಿಕೊಂಡು ಉಳ್ಳಾಲ ಪತ್ರಕರ್ತರ ತಂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಕಾಪಿಕಾಡಿನ ಗಟ್ಟಿ ಸಮಾಜ ಭವನದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.ಪತ್ರಕರ್ತರ ಕರ್ತವ್ಯದಲ್ಲಿ ಬಹಳಷ್ಟು
ಸವಾಲುಗಳಿದೆ. ಆಡಳಿತ ವ್ಯವಸ್ಥೆಯ ಕಿವಿ ಹಾಗೂ ಕಣ್ಣಿನಂತ ಇರುವ ಪತ್ರಕರ್ತರು ಸಮಾಜಕ್ಕೆ ಪೂರಕವಾದ ಮಾಹಿತಿಗಳನ್ನು ಸೂಕ್ತ ರೀತಿಯಲ್ಲಿ ಸಮಾಜದ ಮುಂದಿಡುವ ಜವಾಬ್ದಾರಿಯಿದೆ ಎಂದರು. ಗ್ರಾಮ ಸಂಪರ್ಕ ಅಭಿಯಾನ ಅದ್ಭುತವಾದ ಕಾರ್ಯಕ್ರಮವಾಗಿದೆ ಎಂದರು.
ಉಳ್ಳಾಲದ ಪತ್ರಕರ್ತರ ನಿವೇಶನದ ಎಲ್ಲಾ ಕಾರ್ಯಗಳು ಶೀಘ್ರವೇ ಪೂರ್ಣಗೊಂಡರೆ ಸಂಸದರ ನಿಧಿಯಿಂದ ರೂ.೧೦ ಲಕ್ಷ ಬಿಡುಗಡೆ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಘೋಷಣೆ ಮಾಡಿದರು. ಸಾಮಾಜಿಕ ಜಾಲತಾಣಗಳ ಮಧ್ಯೆ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಕರ್ತರಿದ್ದು, ಸವಾಲುಗಳ ಮಧ್ಯೆ ಬದುಕುವ ಅನಿವಾರ್ಯತೆ ಇದೆ ಎಂದರು.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪತ್ರಕತ್ರರ ಕ್ಷೇಮಾಭಿವೃದ್ಧಿ ನಿಧಿ ಸಂಚಯನಕ್ಕೆ ಚಾಲನೆ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಹಿರಿಯ ಪತ್ರಕರ್ತ ಎನ್.ಟಿ. ಬಾಳೆಪುಣಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಉಳ್ಳಾಲದ ಪತ್ರಕರ್ತರ ಮಕ್ಕಳಿಗೆ ಶೈಕ್ಷಣಿಕ ನಿಧಿಯನ್ನು ವಿತರಿಸಲಾಯಿತು.
ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಬೆಂಗಳೂರು ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಗಟ್ಟಿ ಸಮಾಜದ ಮೇಲ್ಡರು ಹರಿಶ್ಚಂದ್ರ ಗಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಚ ಪಿ.ಬಿ. ಹರೀಶ್ ರೈ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಕೊಲ್ಯ ಕುಲಾಲ ಸಮುದಾಯ ಭವನ ಕಟ್ಟಡ ಸಮಿತಿ ಅಧ್ಯಕ್ಷ ಅನಿಲ್ ದಾಸ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಸ್ವಾಗತಿಸಿದರು. ಅಧ್ಯಕ್ಷ ವಸಂತ ಕೊಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ. ಸತೀಶ್ ಕೊಣಾಜೆ ವಂದಿಸಿದರು. ಉಪಾಧ್ಯಕ್ಷ ದಿನೇಶ್ ನಾಯಕ್ ತೊಕ್ಕೊಟ್ಟು ವಿದ್ಯಾನಿಧಿ ಪುರಸ್ಕೃತರ ಹೆಸರು ವಾಚಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಸತೀಶ್ ಇರಾ, ಸಂತೋಷ್ ಬೇಂಕ್ಯೆ, ಬಾಬು ಜಾರ್ಜ್, ರಿಷಿಕಾ ಕುಂದೇಶ್ವರ, ತೃಪ್ತಿ ಉಚ್ಚಿಲ್ ಅವರಿಂದ ಕರೋಕೆ ಸಂಗಿತ ವೈಭವ, ಕೊಲ್ಯ ಕುಲಾಲ ಸಮಾಜದ ಸದಸ್ಯರ ಮಕ್ಕಳಿಂದ ಯಕ್ಷಗಾನ ನೃತ್ಯ ವೈಭವ, ಅಬ್ಬಕ್ಕ ಟಿವಿ ಸಂಕಲನಕಾರ್ತಿ ಗಾಯತ್ರಿ ಮನೋಜ್ ಹಾಗೂ ಶರಣ್ಯ ಪಿ. ಬಂಗೇರ ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.
ನಿರೂಪಕ ಹಾಗೂ ಕಲಾವಿದ ಚೇತನ್ ಶೆಟ್ಟಿ ಪಿಲಿಕುಲ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.