ಮುಂಬಯಿ: ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ಸಿಡಿಸಿದ ಅಮೋಘ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್
ಹಾಲಿ ಚಾಂಪಿಯನ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ. ಟಿ20 ಕ್ರಿಕೆಟ್ನ ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಈ ಪಂದ್ಯದಲ್ಲಿಯೂ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ನೆರೆದಿದ್ದ
ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು. ಇವರಿಗೆ ವಿಷ್ಣು ವಿನೋದ್ ಉತ್ತಮ ಸಾಥ್ ನೀಡಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಸೂರ್ಯ 31 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ವಿಷ್ಣು ವಿನೋದ್ ಅವರು 19 ಎಸೆಗಳಿಂದ 30 ರನ್ ಬಾರಿಸಿದರು. ಈ ಸ್ಫೋಟಕ ಇನಿಂಗ್ಸ್ ವೇಳೆ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಿಡಿಯಿತು. ಅಂತಿಮ ಹಂತದ ವರೆಗೂ ಬ್ಯಾಟಿಂಗ್ ಕಾಯ್ದುಕೊಂಡ ಸೂರ್ಯಕುಮಾರ್ ಅಜೇಯ ಶತಕ ಬಾರಿಸಿದರು. 49 ಎಸೆತ ಎದುರಿಸಿದ ಅವರು ಬರೋಬ್ಬರಿ 11 ಬೌಂಡರಿ ಮತ್ತು 6 ಸಿಕ್ಸರ್ ನರೆವಿನಿಂದ ಅಜೇಯ 103 ರನ್ ಗಳಿಸಿದರು. ಕೊನೆಯ ಎಸೆತವನ್ನು ಸಿಕ್ಸರ್ಗೆ ಎತ್ತಿ ಸೂರ್ಯ ಶತಕದ ಗಡಿ ದಾಟಿದರು.
ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮ ಮತ್ತು ಇಶಾನ್ ಕಿಶನ್ ಸೇರಿಕೊಂಡು ಓವರ್ಗೆ 10 ಸರಾಸರಿಯಲ್ಲಿ ಬ್ಯಾಟ್ ಬೀಸಿದರು. ರೋಹಿತ್ ಶರ್ಮ ಅವರು ಈ ಪಂದ್ಯದಲ್ಲಿ 29 ರನ್ ರನ್ ಬಾರಿಸಿದರು. ರೋಹಿತ್ ಮತ್ತು ಇಶಾನ್ ಮೊದಲ ವಿಕೆಟ್ಗೆ 61 ರನ್ ಒಟ್ಟುಗೂಡಿಸಿದರು.
ರೋಹಿತ್ ವಿಕೆಟ್ ಪತನದ ಬಳಿಕ 5 ರನ್ ಅಂತರದಲ್ಲಿ ಇಶಾನ್ ಕಿಶನ್ ವಿಕೆಟ್ ಕೂಡ ಬಿತ್ತು. ಮುಂದಿನ ಓವರ್ನಲ್ಲಿ ನೆಹಾಲ್ ವಧೇರಾ ಅವರ ವಿಕೆಟ್ ಕೂಡ ಉಡಾಯಿಸಿದರು. ಇಶಾನ್ 31 ರನ್ ಗಳಿಸಿದರೆ, ವಧೇರಾ 15 ರನ್ ಬಾರಿಸಿದರು.ಗುಜರಾತ್ ಪರ ರಶೀದ್ ಖಾನ್ 4 ವಿಕೆಟ್ ಉರುಳಿಸಿದರು.