ಸುಳ್ಯ: ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ ಮಲ್ಪೆ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ಸುಳ್ಯದ ಪ್ರೆಸ್ ಕ್ಲಬ್ ಆವರಣದಲ್ಲಿ ಆದಿತ್ಯವಾರ ನಡೆಯಿತು.
ಸುಳ್ಯ ತಾಲೂಕು ನಿವೃತ್ತ ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮಗೆ ಯಾವುದೋ ಕಾರಣಗಳಿಂದ ಕಿವಿಯ ದೋಷ ಕಾಣಿಸಿಕೊಳ್ಳುತ್ತದೆ. ಕಿವಿ ಕೇಳಿಸದೇ
ಇರುವುದರಿಂದ ಅವರು ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕಿವಿಯ ತೊಂದರೆ ಬಗ್ಗೆ ತಜ್ಞರಿಂದ ತಪಾಸಣೆ ನಡೆಸಿ ಅದಕ್ಕೆ ಚಿಕಿತ್ಸೆ, ಪರಿಹಾರ ಪಡೆದುಕೊಳ್ಳುವುದು ಉತ್ತಮ. ಶ್ರವಣ ದೋಷಗಳ ಬಗ್ಗೆ ನವಜಾತ ಶಿಶು ಇರುವ ಸಂದರ್ಭದಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದು ಮಾಡಬಹುದು. ಇದೀಗ ಅತ್ಯಾಧುನಿಕ ತಂತ್ರ, ವ್ಯವಸ್ಥೆಗಳು ಕಿವಿಯ ದೋಷ ಪರಿಹಾರಕ್ಕೆ ಇದೆ. ಇಂದು ಸ್ಮಾರ್ಟ್ ತಂತ್ರಗಳನ್ನು ಜೋಡಿಸುವ ಶ್ರವಣ ಉಪಕರಣಗಳು ಇದೆ. ಇಂತಹ ಸಮಸ್ಯೆ ಬಗ್ಗೆ ಆಪ್ತ ಸಮಾಲೋಚನೆ ನಡೆಸಿಯೂ ಚಿಕಿತ್ಸೆ ಪಡೆದುಕೊಳ್ಳಬಹುದು.
ಎಂದರು.

ತಜ್ಞ ವೈದ್ಯೆ ಡಾ.ಅಂಕಿತಾ ಕಲ್ಮಾಡಿ ಮಾತನಾಡಿ ಮಾಹಿತಿ ನೀಡಿದರು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಟೀಮ್ ಈಶ್ವರ ಮಲ್ಪೆ ತಂಡದ ಪಿ.ಆರ್.ಒ. ಲವ ಬಂಗೇರ, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಗಿರೀಶ್ ಅಡ್ಪಂಗಾಯ ಮತ್ತಿತರರು ಉಪಸ್ಥಿತರಿದ್ದರು. ಲೋಕೇಶ್ ಪೆರ್ಲಂಪಾಡಿ ಸ್ವಾಗತಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೊರತ್ತೋಡಿ ವಂದಿಸಿದರು. ಮಿಥುನ್ ಕರ್ಲಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಶ್ರವಣ ತಪಾಸಣೆ:
ಉದ್ಘಾಟನಾ ಕಾರ್ಯಕ್ರಮದ ಬಳಿಕ ತಜ್ಞರ ತಂಡ ಉಚಿತ ಶ್ರವಣ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದರು. ಸಹಾಯಧನದಲ್ಲಿ ಯಂತ್ರ ವಿತರಿಸಲಾಯಿತು. ಡಾ.ಅಂಕಿತಾ ಕಲ್ಮಾಡಿ, ಸಂಚಾಲಕ ಲವ ಬಂಗೇರ, ಸಹಾಯಕರಾದ ಅಂಕಿತಾ, ಧೀರಜ್, ಸವಿತ ಸಹಕರಿಸಿದರು. 40ಕ್ಕೂ ಹೆಚ್ಚು ಮಂದಿ ತಪಾಸಣೆ ನಡೆಸಿದರು. 10ಕ್ಕೂ ಹೆಚ್ಷು ಮಂದಿಗೆ ಶ್ರವಣ ಯಂತ್ರ ವಿತರಿಸಲಾಯಿತು.









