ಸುಳ್ಯ: ಇದು ಸ್ವಾತಂತ್ರ್ಯದ ಅಮೃತಕಾಲ. ಮುಂದಿನ 25 ವರ್ಷಗಳಲ್ಲಿ ಭಾರತ ಅದ್ಭುತ ಸಾಧನೆ ಮಾಡಬೇಕೆಂಬ ಚಿಂತನೆ ಭಾರತೀಯರಲ್ಲಿದೆ. ಅದಕ್ಕೆ ಪೂರಕವಾದ ವಾತಾವರಣ ಈಗ ಇದೆ. ವಿದ್ಯಾರ್ಥಿಗಳಾದ ನಿಮಗೆ ಅದ್ಭುತ ಸಾಧನೆ ಮಾಡಲು ಅವಕಾಶಗಳಿವೆ. ಅದಕ್ಕಾಗಿ ದೃಢ ನಿರ್ಧಾರ ಮಾಡಬೇಕು. ಆಗ ಮಾತ್ರ ನಮ್ಮ ದೇಶವು ಜಗತ್ತಿನ ಪ್ರಬಲ ರಾಷ್ಟ್ರವಾಗಬಹುದು. ವ್ಯಕ್ತಿ ಸ್ವಾತಂತ್ರ್ಯದ ಮೂಲಕ ಸಮಷ್ಟಿ ಏಳಿಗೆಯನ್ನು
ಕಾಣಲು ಸಾಧ್ಯ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು.
ಅವರು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾಗಿರುವ ಡಾ. ವಿದ್ಯಾ ಶಾಂಭವ ಪಾರೆ ಮತ್ತು ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಯವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಸವಿತಾ ಎಂ ವಂದಿಸಿದರು. ಶಿಕ್ಷಕಿ ಜಯಂತಿ ಕೆ ನಿರೂಪಿಸಿದರು.
ಬಳಿಕ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಶಿಕ್ಷಕಿ ಶ್ರೀದೇವಿ ಪಿ.ಎಸ್. ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.