ಮಡಿಕೇರಿ:ಸುಳ್ಯದ ರಂಗ ಮಯೂರಿ ಕಲಾ ಶಾಲೆ, ಮಡಿಕೇರಿಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಫೀ.ಮಾ.ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಆಯೋಜಿತ ರಾಜ್ಯ ಮಟ್ಟದ ‘ಬಣ್ಣ’ ಮಕ್ಕಳ ಶಿಬಿರಕ್ಕೆ ವರ್ಣ ರಂಜಿತ ಚಾಲನೆ ‘ಡೋಲು’ ಬಾರಿಸುವ ಮೂಲಕ
ಮಕ್ಕಳ ಕನಸಿನ ‘ಬಣ್ಣ’ದ ಹಬ್ಬಕ್ಕೆ ಚಾಲನೆ ನೀಡಿದ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ನವೀನ್ ಅಂಬೆಕಲ್ಲು, ಮಡಿಕೇರಿಯಲ್ಲಿ ಎರಡನೇ ಬಾರಿ ಆಯೋಜಿತವಾಗುತ್ತಿರುವ ಬಣ್ಣ ಶಿಬಿರದ ಮೂಲಕ, ಶಾಲಾ ಕಲಿಕೆಯನ್ನು ಮೀರಿದ ವಿವಿಧ ವಿಚಾರಗಳ ಅರಿವನ್ನು ಪಡೆದುಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿದರು.
ನಗರದ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಕಾಂಚನ ಕೆದಂಬಾಡಿ,ಸರ್ಕಾರಿ ಪದವಿ ಪೂರ್ವ ಕಲೇಜಿನ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾದ ಚಿದಾನಂದ, ನೃತ್ಯ ತರಬೇತುದಾರರಾದ ವಿನೋದ್ ಕರ್ಕೇರ ಮಾತನಾಡಿ ಶುಭ ಹಾರೈಸಿದರು.
ಶಿಬಿರದ ಆಯೋಜಕ ಹಾಗು ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾಂಗಣದ ಪ್ರವೇಶ ದ್ವಾರದಲ್ಲಿರುವ ಫೀ.ಮಾ.ಕೆ.ಎಂ.ಕಾರ್ಯಪ್ಪ ಪುತ್ತಳಿಗೆ ಶಿಬಿರದ ಆಯೋಜಕರು, ಅತಿಥಿಗಳು, ಶಿಬಿರಾರ್ಥಿಗಳು, ಪೋಷಕರು ಪುಷ್ಪಾರ್ಚನೆ ಮಾಡುವುದರೊಂದಿಗೆ ‘ಬಣ್ಣ’ ಶಿಬಿರಕ್ಕೆ ವಿದ್ಯುಕ್ತ ಚಾಲನೆ ದೊರಕಿತು ಶಿಬಿರ ಏಪ್ರಿಲ್ 30 ರವರೆಗೆ ನಡೆಯಲಿದೆ.