ಸುಳ್ಯ:ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರ ವತಿಯಿಂದ ಜನ ಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಆಚರಣೆ ಮತ್ತು ಬೃಹತ್ ಪಂಜಿನ ಮೆರವಣಿಗೆ ಆ.14ರಂದು ಸುಳ್ಯ ನಗರದಲ್ಲಿ ನಡೆಯಿತು. ಸುಳ್ಯ ನಗರದ ಶಾಸ್ತ್ರಿ ವೃತ್ತದಿಂದ ಹೊರಟ ಪಂಜಿನ ಮೆರವಣಿಗೆ ಮುಖ್ಯರಸ್ತೆಯಲ್ಲಿ ಗಾಂಧಿನಗರ ತನಕ ಸಾಗಿ ಬಳಿಕ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಸಮಾಪನಗೊಂಡಿತು. ಬಳಿಕ ಚೆನ್ನಕೇಶವ
ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಸೈನಿಕರಾದ ಲೋಕೇಶ್ ಇರಂತಮಜಲು ದೀಪ ಬೆಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಮಾರಂಭವನ್ನು ಉದ್ಘಾಟಿಸಿದರು. ‘ಭಯೋತ್ಪಾದನೆ ಈ ದೇಶ ಎದುರಿಸುವ ದೊಡ್ಡ ಸವಾಲು. ಅದರ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ, ಜಾಗೃತಿ ವಹಿಸಬೇಕಾಗಿದೆ ಎಂದು ಅವರು ಹೇಳಿದರು.
![](https://thesulliamirror.com/wp-content/uploads/2023/08/IMG_20230814_204022.jpg)
ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಾಮರಸ್ಯ ವಿಭಾಗದ ಸಹ ಸಂಯೋಜಕ ಶಿವಪ್ರಸಾದ್ ಮಲೆಬೆಟ್ಟು ಮಾತನಾಡಿ ‘ಸ್ವಾತಂತ್ರ್ಯಕ್ಕಾಗಿ ನಮ್ಮ ದೇಶದ ಸಾರ್ವಭೌಮತ್ವಕ್ಕಾಗಿ ನಮ್ಮ ಹಿರಿಯರು ಪ್ರಾಣ ತ್ಯಾಗ ಮಾಡಿದ್ದಾರೆ.ನಮ್ಮ ಹಿರಿಯರ ತ್ಯಾಗದ, ಸಮರ್ಪಣೆಯ, ಹೋರಾಟದ ಇತಿಹಾಸವನ್ನು ಎಲ್ಲರೂ ತಿಳಿಯಬೇಕು, ಅವರ ತ್ಯಾಗವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಅವರ ಹೋರಾಟ, ತ್ಯಾಗದ ಸ್ಮರಣೆ ನಮಗೆ ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು. ತ್ರಿಖಂಡವಾದ ಭಾರತವನ್ನು ಅಖಂಡವಾಗಿಸುವ ಸಂಕಲ್ಪದೊಂದಿಗೆ ಅಖಂಡ ಭಾರತ ಸಂಕಲ್ಪ ದಿನಾಚರಣೆ ಆಚರಿಸಲಾಗುತ್ತದೆ. ಅದಕ್ಕಾಗಿ ನಮ್ಮ ಮಧ್ಯೆ ಇರುವ ಭೇಧ ಭಾವ, ಅಸ್ಪೃಶ್ಯತೆಯನ್ನು ದೂರ ಮಾಡಿ ಹಿಂದೂ ಸಮಾಜ ಅಖಂಡವಾಗಬೇಕು ಎಂದು ಅವರು ಹೇಳಿದರು.
![](https://thesulliamirror.com/wp-content/uploads/2023/08/IMG_20230814_204039.jpg)
ಶಿವಪ್ರಸಾದ್ ಅವರಿಂದ ದಿಕ್ಸೂಚಿ ಭಾಷಣ
ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳದ ತಾಲೂಕು ಸಂಚಾಲಕ ಬಿ.ವಿ. ಹರಿಪ್ರಸಾದ್, ವಿಶ್ವ ಹಿಂದೂ ಪರಿಷತ್ ನಗರ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ವಿಧಿ ಪ್ರಮುಖ್ ಸಂದೀಪ್ ವಳಲಂಬೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ.ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ವಂದೇ ಮಾತರಂ ಹಾಡಿದರು.ವಿಶ್ವ ಹಿಂದೂ ಪರಿಷತ್ ನಗರ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ ವಂದಿಸಿದರು.ತೀರ್ಥೇಶ್ ಯಾದವ್ ನಾರ್ಣಕಜೆ ಕಾರ್ಯಕ್ರಮ ನಿರೂಪಸಿದರು.