ಸುಳ್ಯ:ಎನ್ಸಿಸಿಯು ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯ, ಶಿಸ್ತು, ಏಕತೆ, ಸಮರ್ಪಣಾ ಮನೋಭಾವವನ್ನು ಕಲಿಸುವುದರ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ಇಲ್ಲಿ ಕಲಿತ ಶಿಸ್ತು ಜೀವನಕ್ಕೆ ದಾರಿ ದೀಪವಾಗಬೇಕು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದ ಅವರು ಕರೆ ನೀಡಿದರು. ಅವರು ಸುಳ್ಯದ
ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ ಮಡಿಕೇರಿ ಇದರ ಆಶ್ರಯದಲ್ಲಿ ನಡೆಯುತ್ತಿರುವ RDC-II ಮತ್ತು CATC ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ರಕ್ಷಣಾ ವ್ಯವಸ್ಥೆ ಮತ್ತು ಸರಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಎನ್ ಸಿ ಸಿ ಕೆಡೆಟ್ ಗಳಿಗೆ ವಿಫುಲ ಅವಕಾಶಗಳಿವೆ.

ಮಹಿಳೆಯರು ಕೂಡ ಕಮಾಂಡೆಂಟ್ ಗಳಾಗಿ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆ ತರುವ ಸಂಗತಿ ಎಂದರು.
ಸಮಾರಂಭದಲ್ಲಿ ಶಿಬಿರದ ನೇತೃತ್ವವನ್ನು ವಹಿಸಿರುವ 19 ಕರ್ನಾಟಕ ಬೆಟಾಲಿಯನ್ನ ಎನ್ ಸಿ ಸಿ ಯ ಕಮಾಂಡಿಂಗ್ ಆಫಿಸರ್ ಲೆಫ್ಟಿನೆಂಟ್ ಕರ್ನಲ್ ರೆಜಿತ್ ಮುಕುಂದನ್, ಸುಬೇದಾರ್ ಮೇಜರ್ ಶಿಜು ಪಿ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ. ಎಂ, ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಸೀತಾರಾಮ ಎಂ ಡಿ, ರಾಜ್ಯದ ವಿವಿಧ ಬೆಟಾಲಿಯನ್ಗಳಿಂದ ಆಗಮಿಸಿದ ಅಧಿಕಾರಿ ವರ್ಗ, ವಿವಿಧ ಘಟಕಗಳ ಎನ್ಸಿಸಿ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿಗಳು ಹಾಗೂ ಎನ್ಸಿಸಿ ಕೆಡೆಟ್ ಗಳು ಉಪಸ್ಥಿತರಿದ್ದರು.





