ದುಬೈ: ಸ್ಪಿನ್ನರ್ ವರುಣ್ ಚಕ್ರವರ್ತಿ ಸ್ಪಿನ್ ಮೋಡಿ (42ಕ್ಕೆ 5 ವಿಕೆಟ್) ನೆರವಿನಿಂದ ಭಾರತ ತಂಡವು, ನ್ಯೂಜಿಲೆಂಡ್ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ 44 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.ಆ ಮೂಲಕ ‘ಎ’ ಗುಂಪಿನಲ್ಲಿ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಅಲ್ಲದೆ ಮಾರ್ಚ್ 4ರಂದು ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ
ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ.ಭಾರತ ಒಡ್ಡಿದ 250 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 45.3 ಓವರ್ಗಳಲ್ಲಿ 205 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ದಿಟ್ಟ ಹೋರಾಟ ನೀಡಿದ ಕೇನ್ ವಿಲಿಯಮ್ಸನ್ ಗರಿಷ್ಠ 81 ರನ್ ಗಳಿಸಿದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಕ್ಷಣದಲ್ಲಿ ಗಾಯಾಳು ಜಸ್ಪ್ರೀತ್ ಬೂಮ್ರಾ ಸ್ಥಾನಕ್ಕೆ ಆಯ್ಕೆಯಾಗಿದ್ದ ವರುಣ್ ಚಕ್ರವರ್ತಿ, ಟೂರ್ನಿಯಲ್ಲಿ ತಾವು ಆಡಿದ ಮೊದಲ ಪಂದ್ಯದಲ್ಲೇ ಐದು ವಿಕೆಟ್ಗಳ ಸಾಧನೆ ಮಾಡಿದರು.
ವರುಣ್ 42 ರನ್ ತೆತ್ತು ಐದು ವಿಕೆಟ್ ಗಳಿಸಿದರು. ವರುಣ್ಗೆ ತಕ್ಕ ಸಾಥ್ ನೀಡಿದ ಕುಲದೀಪ್ ಯಾದವ್ ಎರಡು ಮತ್ತು ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ತಲಾ ಒಂದು ವಿಕೆಟ್ಗಳನ್ನು ಗಳಿಸಿದರು.
ಈ ಮೊದಲು ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕದ (79) ನೆರವಿನಿಂದ ಭಾರತ ತಂಡವು 50 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 249 ರನ್ ಪೇರಿಸಿತು.ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಭಾರತದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 22 ತಲುಪುವರಷ್ಟರಲ್ಲಿ ಆರಂಭಿಕರಾದ ನಾಯಕ ರೋಹಿತ್ ಶರ್ಮಾ (15) ಹಾಗೂ ಶುಭಮನ್ ಗಿಲ್ (2) ವಿಕೆಟ್ ನಷ್ಟವಾಯಿತು.ತಮ್ಮ 300ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 11 ರನ್ ಗಳಿಸಿ ಔಟ್ ಆದರು. ಮ್ಯಾಟ್ ಹೆನ್ರಿ ದಾಳಿಯಲ್ಲಿ ಗ್ಲೆನ್ ಫಿಲಿಪ್ಸ್ ಅದ್ಭುತ ಕ್ಯಾಚ್ ಪಡೆದರು.
ಈ ಹಂತದಲ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ತಂಡವನ್ನು ನಿಧಾನಗತಿಯಲ್ಲಿ ಮುನ್ನಡೆಸಿದರು. ಇವರಿಬ್ಬರು ನಾಲ್ಕನೇ ವಿಕೆಟ್ಗೆ 98 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.ಅಕ್ಷರ್ ಪಟೇಲ್ 61 ಎಸೆತಗಳಲ್ಲಿ 42 (3 ಬೌಂಡರಿ, 1 ಸಿಕ್ಸರ್) ರನ್ ಗಳಿಸಿದರು. ಕಲಾತ್ಮಕ ಇನಿಂಗ್ಸ್ ಕಟ್ಟಿದ ಶ್ರೇಯಸ್ ಅರ್ಧಶತಕ (79) ಗಳಿಸಿದರು. 98 ಎಸೆತಗಳನ್ನು ಎದುರಿಸಿದ ಶ್ರೇಯಸ್ ಇನಿಂಗ್ಸ್ನಲ್ಲಿ 4 ಬೌಂಡರಿ ಹಾಗೂ ಎರಡು ಸಿಕ್ಸರ್ಗಳು ಸೇರಿದ್ದವು.
ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ (45), ಕೆ.ಎಲ್. ರಾಹುಲ್ (23) ಹಾಗೂ ರವೀಂದ್ರ ಜಡೇಜ (16) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇನ್ನುಳಿದಂತೆ ಮೊಹಮ್ಮದ್ ಶಮಿ (5) ಹಾಗೂ ಕುಲದೀಪ್ ಯಾದವ್ (1*) ರನ್ ಗಳಿಸಿದರು.ಕಿವೀಸ್ ಪರ ಮ್ಯಾಟ್ ಹೆನ್ರಿ 42 ರನ್ ತೆತ್ತು ಐದು ವಿಕೆಟ್ ಗಳಿಸಿ ಮಿಂಚಿದರು.