ನವದೆಹಲಿ: ಬಾಂಗ್ಲಾದೇಶ ತಂಡವನ್ನು ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಕೊಕ್ ನೀಡಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಹಾಕಲಾಗಿತ್ತು. ಅದರಿಂದಾಗಿ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಗಳಲ್ಲಿ
ತಮ್ಮ ತಂಡ ಆಡುವುದಿಲ್ಲ. ತಮ್ಮ ಪಾಲಿನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಬೇಕು ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಒತ್ತಾಯಿಸಿತ್ತು.ಆದರೆ ಐಸಿಸಿಯು ಭಾರತದಲ್ಲಿಯೇ ಪಂದ್ಯಗಳನ್ನು ಆಡಲು ಬಾಂಗ್ಲಾಕ್ಕೆ ಸೂಚಿಸಿತ್ತು. ಆದರೆ ಬಾಂಗ್ಲಾ ಪಟ್ಟು ಸಡಿಲಿಸಲಿಲ್ಲ. ಸುಮಾರು ಒಂದು ತಿಂಗಳು ನಡೆದ ಈ ಪ್ರಹಸನಕ್ಕೆ ಶನಿವಾರ ಐಸಿಸಿಯು ತೆರೆ ಎಳೆದಿದೆ.ಐಸಿಸಿ ಮಂಡಳಿಗಳ ಸಭೆಯಲ್ಲಿ ಈ ವಿಷಯದ ಕುರಿತು ಸದಸ್ಯರ ಅಭಿಮತ ಪಡೆಯಲಾಯಿತು. ಬಾಂಗ್ಲಾ ತಂಡವು ಭಾರತದಲ್ಲಿಯೇ ಪಂದ್ಯಗಳನ್ನು ಆಡಬೇಕೆಂಬ ನಿರ್ಣಯವು 14–2 ಮತಗಳಿಂದ ಮೇಲುಗೈ ಸಾಧಿಸಿತು.ಅದರಿಂದಾಗಿ ಬಾಂಗ್ಲಾ ಮಂಡಳಿಗೆ ತನ್ನ ತೀರ್ಮಾನ ವ್ಯಕ್ತಪಡಿಸಲು ಐಸಿಸಿಯು 24 ಗಂಟೆಗಳ ಗಡುವು ನೀಡಿತ್ತು. ಆದರೆ ಬಾಂಗ್ಲಾ ಸರ್ಕಾರದ ಕ್ರೀಡಾ ಸಚಿವಾಲಯದ ಸಲಹೆಗಾರ ಅಸೀಫ್ ನಜ್ರುಲ್ ಅವರು ಐಸಿಸಿ ತೀರ್ಪನ್ನು ಒಪ್ಪಲಿಲ್ಲ. ಇದರಿಂದಾಗಿ
ಬಾಂಗ್ಲಾ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದೆ.ಬಾಂಗ್ಲಾಕ್ಕೆ ಕೊಟ್ಟ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಐಸಿಸಿಯ ಮುಖ್ಯಸ್ಥ ಜಯ್ ಶಾ ಸೇರಿದಂತೆ ಪ್ರಮುಖ ಅಧಿಕಾರಿಗಳು ದುಬೈನ ಕಚೇರಿಯಲ್ಲಿ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದೆ.
ಸ್ಕಾಟ್ಲೆಂಡ್ ತಂಡವು ಗುಂಪು ಹಂತದಲ್ಲಿ ವೆಸ್ಟ್ ಇಂಡೀಸ್ (ಫೆ. 7), ಇಟಲಿ (ಫೆ. 9) ಮತ್ತು ಇಂಗ್ಲೆಂಡ್ (ಫೆ. 14) ವಿರುದ್ಧ ಕೋಲ್ಕತ್ತದಲ್ಲಿ ಪಂದ್ಯಗಳನ್ನು ಆಡಲಿದೆ. ಫೆ.17ರಂದು ಮುಂಬೈನಲ್ಲಿ ನೇಪಾಳ ಎದುರು ಆಡುವುದು.
ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪಿರುವುದಕ್ಕೆ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಆರ್ಥಿಕ ನಷ್ಟವಾಗಲಿದೆ. ಲ ವಿಶ್ವಕಪ್ ಟೂರ್ನಿಯಲ್ಲಿ ಆಡುವುದರಿಂದ ಲಭಿಸುವ 4.5 ಕೋಟಿ ಸ್ಪರ್ಧಾ ಶುಲ್ಕವು ಕೈತಪ್ಪಲಿದೆ.
ಇದಲ್ಲದೇ ವಾರ್ಷಿಕವಾಗಿ ಐಸಿಸಿಯಿಂದ ಸಿಗುವ ಸುಮಾರು 247 ಕೋಟಿಯ ಅನುದಾನದ ಶೇ 60ರಷ್ಟು ಖೋತಾ ಆಗಬಹುದು. ದ್ವಿಪಕ್ಷೀಯ ಸರಣಿಗಳ ಕಡಿತವೂ ಆಗಲಿದೆ. ಅಲ್ಲದೇ ಪ್ರಾಯೋಜಕತ್ವ ಮತ್ತಿತರ ಒಪ್ಪಂದಗಳಿಂದ ಬರುವ ಆದಾಯವೂ ನಷ್ಟವಾಗಲಿದೆ ಎಂದು ವರದಿಗಳು ಹೇಳಿವೆ












