ಶಿಮ್ಲಾ:ಹಿಮಾಚಲ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ಮತ್ತೆ ಮೇಘಸ್ಪೋಟ ಸಂಭವಿಸಿದೆ, ಇದರಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶದ ಸೋಲನ್ನ ಜಾಡೋನ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ್ದು ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಮೂವರು ನಾಪತ್ತೆಯಾಗಿದ್ದಾರೆ. ಐವರನ್ನು
ರಕ್ಷಿಸಲಾಗಿದೆ. ಮೇಘ ಸ್ಪೋಟದಿಂದ ಹಠಾತ್ ಪ್ರವಾಹಕ್ಕೆ ಎರಡು ಮನೆಗಳು ಮತ್ತು ದನದ ಕೊಟ್ಟಿಗೆ ಕೊಚ್ಚಿಕೊಂಡು ಹೋಗಿದೆ ಎಂದು ಕಂದಘಾಟ್ ಉಪವಿಭಾಗೀಯ ಅಧಿಕಾರಿ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶ ಮತ್ತು ನೆರೆಯ ಉತ್ತರಾಖಂಡದಲ್ಲಿ ಭಾರೀ ಮಳೆಯು ಮುಂದುವರಿದಿದ್ದು, ಭೂಕುಸಿತಗಳು ಪ್ರಮುಖ ರಸ್ತೆಗಳನ್ನು ನಿರ್ಬಂಧಿಸಿವೆ, ಸೇತುವೆಗಳು ಕೊಚ್ಚಿಹೋಗಿವೆ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ನದಿಗಳ ನೀರಿನ ಮಟ್ಟವು ಎತ್ತರಕ್ಕೆ ತಲುಪಿದೆ. ಹಿಮಾಚಲ ಪ್ರದೇಶದಲ್ಲಿ, ಶಿಮ್ಲಾದಲ್ಲಿ ಮರವೊಂದು ಉರುಳಿ ವಾಹನದ ಮೇಲೆ ಬಿದ್ದಿದೆ ಪರಿಣಾಮ ಖಾಸಗಿ ಬಸ್ನ ಕಂಡಕ್ಟರ್ ಗಾಯಗೊಂಡಿದ್ದಾರೆ. ನಿರಂತರ ಮಳೆಯಿಂದಾಗಿ
ಶಿಮ್ಲಾ ಮತ್ತು ಚಂಡೀಗಢವನ್ನು ಸಂಪರ್ಕಿಸುವ ಶಿಮ್ಲಾ-ಕಲ್ಕಾ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಭಾಗವು ಕಳೆದ ಎರಡು ವಾರಗಳಿಂದ ಪುನರಾವರ್ತಿತ ಭೂಕುಸಿತಗಳಿಂದ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.