ಸುಳ್ಯ: ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪುತ್ರ, ಸುಳ್ಯದ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಅವರು ತಾವು ಕಲಿತ ಶಾಲೆ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕೋಟಿಗೂ ಮಿಕ್ಕಿ ಮೌಲ್ಯದ ತರಗತಿ ಕೊಠಡಿಗಳ ಕಟ್ಟಡ ಸಮುಚ್ಛಯವನ್ನು ಕೊಡುಗೆಯಾಗಿ ನೀಡಲಿದ್ದಾರೆ. ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಅಮೃತ ಮಹೋತ್ಸವದ ಸವಿನೆನಪಿಗಾಗಿ ನೂತನ ಕಟ್ಟಡವನ್ನು ಕೊಡುಗೆಯಾಗಿ
ನೀಡಲಿದ್ದಾರೆ. ಇವರು ನಿರ್ಮಿಸುವ ಕಟ್ಟಡಕ್ಕೆ ಅಮೃತ ಮಹೋತ್ಸವ ಸಮಾರಂಭದ ಕೊನೆಯ ದಿನವಾದ ಡಿ.29ರಂದು ಸೋಮವಾರ ಪೂ.10ಕ್ಕೆ ಡಾ.ಕೆ.ವಿ.ಚಿದಾನಂದ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಶಿಕ್ಷಣ, ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಡಾ.ಕೆ.ವಿ.ಸಿ ಅವರು ಇದೀಗ ತಾನು ಕಲಿತ ಬೋರ್ಡ್ ಹೈಸ್ಕೂಲು, ಪದವಿ ಪೂರ್ವ ಕಾಲೇಜು ಆಗಿ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ

ಸುಮಾರು 1.5 ಕೋಟಿ ಮೊತ್ತದ ಕಟ್ಟಡ ಸಮುಚ್ಚಯ ಕಟ್ಟಿಸಲು ಮುಂದಾಗಿದ್ದಾರೆ. ಡಾ.ಕೆ.ವಿ.ಚಿದಾನಂದ ತರಗತಿ ಕೋಣೆಗಳ
ತರಗತಿ ಕಟ್ಟಡ ಸಮುಚ್ಚಯಲ್ಲಿ ಪ್ರಥಮ ಮಹಡಿಯು ಒಟ್ಟು 5.400 ಚದರ ಅಡಿ ವಿಸ್ತೀರ್ಣ ಇರಲಿದ್ದು ತಲಾ 550 ಚದರ ಅಡಿಯ 4 ಕೊಠಡಿಗಳು, 840 ಚದರ ಅಡಿಗಳ ಕಂಪ್ಯೂಟರ್ ಲ್ಯಾಬ್ ಕೊಠಡಿ, ದ್ವಿತೀಯ ಮಹಡಿಯಲ್ಲಿ 6 ಸಾವಿರ ಚದರ ಅಡಿ ಮೆಟಲ್ ಪ್ಯಾಬ್ರಿಕೇಷನ್ ಕೊಠಡಿ ನಿರ್ಮಿಸಲಿದ್ದು 300 ಆಸನ ಸಾಮರ್ಥ್ಯವುಳ್ಳ ಸಭಾಂಗಣ, 550 ಚದರ ಅಡಿ ವಿಸ್ತೀರ್ಣದ ಪೂರ್ವ ವಿಧ್ಯಾರ್ಥಿಗಳ ಕೊಠಡಿ ನಿರ್ಮಾಣ ಆಗಲಿದೆ. ಅಲ್ಲದೆ ಇಪ್ಪತ್ತು ಸಾವಿರ ಲೀಟರ್ ಸಾಮರ್ಥ್ಯವುಳ್ಳ ಓವರ್ ಹೆಡ್ ವಾಟರ್ ಟ್ಯಾಂಕ್ ನಿರ್ಮಾಣ ಕಾರ್ಯ ನಡೆಯಲಿದೆ.

















