ಸುಳ್ಯ:ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯತ್ ಕೆಡಿಪಿ ಸಭೆಯ ಬಳಿಕ ನಿನ್ನೆ ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ಸುಳ್ಯದ ರಸ್ತೆಗಳ ಹೊಂಡ ಗುಂಡಿಗಳದ್ದೇ ಚರ್ಚೆ. ತಾಲೂಕಿನ ರಸ್ತೆಗಳಲ್ಲಿ ಮಾತ್ರವಲ್ಲದೆ ನಗರದ ರಸ್ತೆಗಳಲ್ಲಿಯೂ ಎಲ್ಲಿಯೂ ಓಡಾಡಲು ಆಗುತ್ತಿಲ್ಲ, ಹೊಂಡ, ಗುಂಡಿ, ಕೆಸರು ತುಂಬಿದ ರಸ್ತೆಯಲ್ಲಿ
ಸಂಚಾರ ಸಾಧ್ಯವಿಲ್ಲದಂತಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ ರಸ್ತೆಯ ಗುಂಡಿಗಳನ್ನು ಮುಚ್ಚಲಿಲ್ಲ, ಕುಡಿಯುವ ನೀರಿನ ಕಾಮಗಾರಿ ಹೆಸರಿನಲ್ಲಿ ರಸ್ತೆಯನ್ನು ಸಂಪೂರ್ಣ ಹಾಳುಗೆಡವಿದ್ದು ಎಷ್ಟೆ ಹೇಳಿದರು ದುರಸ್ತಿ ಪಡಿಸುವ ಕಾರ್ಯವಾಗಿಲ್ಲ ಹಾಗಾಗಿ ಮೊದಲು ಇದಕ್ಕೆ ಒಂದು ತಾರ್ಕಿಕ ಅಂತ್ಯ ಆಗಬೇಕು. ಆದುರಿಂದ ಸಂಬಂಧಪಟ್ಟ ಇಲಾಖೆಗೆ, ಸಚಿವಾಲಯಕ್ಕೆ ದೂರು ನೀಡುಲು ನಿರ್ಣಯಿಸುವಂತೆ ಒತ್ತಾಯಿಸಿದರು. ಎಲ್ಲಾ ಸದಸ್ಯರು
ಇದಕ್ಕೆ ಧ್ವನಿಗೂಡಿಸಿದರು. ಸದಸ್ಯ ವಿನಯ ಕುಮಾರ್ ಕಂದಡ್ಕ ಮಾತನಾಡಿ ರಸ್ತೆಗಳ ಗುಂಡಿಗಳ ಸಮಸ್ಯೆ, ಅಮೃತ್ ಯೋಜನೆಯ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಸಂಬಂಧಪಟ್ಟ ನಗರಾಡಳಿತ ಸಚಿವಾಲಯಕ್ಕೆ, ಇಲಾಖೆಗೆ ನೀಡಬೇಕು ಎಂಸು ಸಲಹೆ ನೀಡಿದರು.
ಸದಸ್ಯ ಕೆ.ಎಸ್.ಉಮ್ಮರ್ ಮಾತನಾಡಿ ನಿರಂತರವಾಗಿ 6 ತಿಂಗಳಿಂದ ಖರ್ಚಿನ ಪಟ್ಟಿ ಸಭೆಗೆ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದರು. ನಗರ ಪಂಚಾಯತ್ನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸಂಬಂಧಪಟ್ಟವರಿಗೆ ಬರೆಯಬೇಕು ಎಂದು ಸದಸ್ಯ ಶರೀಫ್ ಕಂಠಿ,ಕೆ ಎಸ್ ಉಮ್ಮರ್,ಎಂ ವೆಂಕಪ್ಪ ಗೌಡ ಹೇಳಿದರು. ಸೂಕ್ತ ಕ್ರಮ ಕೈಗೊಳ್ಳುವಿದಾಗಿ ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬುದ್ದನಾಯ್ಕ್ , ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ , ನಗರ ಪಂಚಾಯತ್ ಮುಖ್ಯಾಧಿಕಾರಿ ಹೆಚ್.ಆರ್.ಬಸವರಾಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.





