ಸಂಪಾಜೆ:ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಮನ್ವಯ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಅವರ ಅಧ್ಯಕ್ಷತೆ ವಹಿಸಿದ್ದರು. ಸಂಘವು ವರದಿ ವರ್ಷದಲ್ಲಿ 108.98 ಕೋಟಿ ವ್ಯವಹಾರ ಮಾಡಿ ರೂ.4160184.45 ದಾಖಲೆಯ ನಿವ್ವಳ ಲಾಭಗಳಿಸಿರುತ್ತದೆ. 98.08% ರಷ್ಟು ಸಾಲ ವಸೂಲಾತಿ ಮಾಡಿದ್ದು, ಆಡಿಟ್ ವರ್ಗದಲ್ಲಿ ಸಂಘವು
ಸತತ 13 ವರ್ಷಗಳಿಂದ “ಎ ” ತರಗತಿಯನ್ನು ಪಡೆದಿರುತ್ತದೆ. ಹಿಂದಿನ ಸಾಲಿಗೆ ಹೋಲಿಸಿದರೆ ಪಾಲು ಬಂಡವಾಳದಲ್ಲಿ, ಧನ ವಿನಿಯೋಗದಲ್ಲಿ, ಒಟ್ಟು ವ್ಯವಹಾರದಲ್ಲಿ, ಲಾಭಾಂಶದಲ್ಲಿ, ಹೊರಬಾಕಿ ಸಾಲದಲ್ಲಿ ಹಾಗೂ ಠೇವಣಿಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು
ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಸಂಘದ ಪ್ರಗತಿಯ ಬಗ್ಗೆ ವಿವರಿಸಿದರು. ಸಂಘಕ್ಕೆ ಈ ಬಾರಿಯೂ ಜಿಲ್ಲಾ ಬ್ಯಾಂಕ್ ಪ್ರಶಸ್ತಿ ಬಂದಿದ್ದು ಸಂಘಕ್ಕೆ ಇದು ಪ್ರಶಸ್ತಿ ದೊರೆಯುತ್ತಿರುವುದು ಸತತ 10ನೇ ಬಾರಿ ಆಗಿರುತ್ತದೆ. ಸಂಘಕ್ಕೆ ಪ್ರಶಸ್ತಿ ಬರಲು ಹಾಗೂ ಸಂಘದ ಅಭಿವೃದ್ಧಿಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ 85%ಕ್ಕಿಂತ ಅಧಿಕ ಅಂಕ ಗಳಿಸಿದ ಗ್ರಾಮದ ಸದಸ್ಯರ 26 ಮಕ್ಕಳಿಗೆ ವಿದ್ಯಾರ್ಥಿವೇತನ ಮೊತ್ತ ರೂ.85,500/-ವನ್ನು ಸ್ಮರಣಿಕೆಯೊಂದಿಗೆ ವಿತರಿಸಲಾಯಿತು.
ಸಂಘದ ಸದಸ್ಯರಾದ ಕೆ ಪಿ ಜಗದೀಶ್, ವೆಂಕಟೇಶ್ ಹೆಚ್, ಮಂಜುನಾಥ ಕೆ, ನಾಗೇಶ ಪಿ ಆರ್, ಅಬುಸಾಲಿ, ಜಯಾನಂದ, ಕುಶಾಲಪ್ಪ ಮುಂತಾದವರು ಚರ್ಚಿಸಿದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮೂರು ನವೋದಯ ಸ್ವಸಹಾಯ ಸಂಘಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ವಾರ್ಷಿಕ ವರದಿ ಹಾಗೂ ಆರ್ಥಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಸಂಘದ ನಿರ್ದೇಶಕರಾದ ಗಣಪತಿ ಭಟ್ ಪಿಎನ್, ಆನಂದ ಪಿಎಲ್, ಜಗದೀಶ ರೈ ಕೆಆರ್, ಹಮೀದ್ ಎಚ್, ಚಂದ್ರಶೇಖರ ಕೆ ಯು, ಉಷಾ ಕೆಎಂ, ಸುಮತಿ ಶಕ್ತಿವೇಲು, ಯಮುನಾ ಬಿಎಸ್, ಪ್ರಕಾಶ್ ಕೆ ಪಿ ಹಾಗೂ ರಾಜೀವಿ ಕೆ ರವರು ಸಭೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ ನಿರ್ದೇಶಕ ಜಾನಿ ಕೆ ಪಿ ವಂದಿಸಿದರು. ಲೂಕಾಸ್ ಕಾರ್ಯಕ್ರಮ ನಿರೂಪಿಸಿ ಸಿಬ್ಬಂದಿಗಳು ಸಹಕರಿಸಿದರು.