ಗುವಾಹಟಿ: ರಾಜಸ್ಥಾನ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 6 ರನ್ ಅಂತರದ ಜಯ ಸಾಧಿಸಿತು. ಆ ಮೂಲಕ, ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಜಯದ ಖಾತೆ ತೆರೆಯಿತು.183 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಎಡಗೈ ಬ್ಯಾಟರ್ ರಚಿನ್ ರವೀಂದ್ರ ಮೊದಲ ಓವರ್ನಲ್ಲೇ ಔಟಾದರು. ನಂತರ
ರಾಹುಲ್ ತ್ರಿಪಾಠಿ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಆಟ ಕೇವಲ 18 ರನ್ಗೆ ಕೊನೆಯಾಯಿತು. ಬಳಿಕ ಬಂದ ವಿಜಯ್ ಶಂಕರ್ (8 ರನ್) ಹೆಚ್ಚು ಹೊತ್ತು ನಿಲ್ಲಲಿಲ್ಲ.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ನೆಲಕಚ್ಚಿ ಆಡಿದ ನಾಯಕ ಋತುರಾಜ್ ಗಾಯಕವಾಡ್ 44 ಎಸೆತಗಳಲ್ಲಿ 63 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರವೀಂದ್ರ ಜಡೇಜ (22 ಎಸೆತ, ಅಜೇಯ 32 ರನ್) ಹಾಗೂ ಎಂ.ಎಸ್. ಧೋನಿ (11 ಎಸೆತ, 16 ರನ್) ಬೀಸಾಟವಾಡಿದರೂ, ನಿಗದಿತ ಓವರ್ಗಳಲ್ಲಿ 6 ವಿಕೆಟ್ಗೆ 176 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ರಾಯಲ್ಸ್ ಪರ ವನಿಂದು ಹಸರಂಗ ನಾಲ್ಕು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಮತ್ತು ಸಂದೀಪ್ ಶರ್ಮಾ ಒಂದೊಂದು ವಿಕೆಟ್ ಪಡೆದರು.ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಆರ್ಆರ್ ನಿಗದಿತ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 182 ರನ್ಗಳಿಸಿತು.ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (4 ರನ್), ಮೊದಲ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ನಿತೀಶ್ ರಾಣಾ, ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 82 ರನ್ ಸೇರಿಸಿದರು. ಇದರಲ್ಲಿ
ಸಂಜು ಗಳಿಸಿದ್ದು 20 ರನ್ ಮಾತ್ರ. ಉಳಿದ ರನ್ಗಳು ರಾಣಾ ಬ್ಯಾಟ್ನಿಂದ ಬಂದವು.
36 ಎಸೆತಗಳನ್ನು ಎದುರಿಸಿದ ರಾಣಾ, 10 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 81 ರನ್ ಚಚ್ಚಿದರು.ನಾಯಕ ರಿಯಾನ್ ಪರಾಗ್, 28 ಎಸೆತಗಳಲ್ಲಿ 37 ರನ್ ಗಳಿಸಿದರು.
ಟೂರ್ನಿಯಲ್ಲಿ ಮೊದಲ ಪಂದ್ಯ ಮುಂಬೈ ವಿರುದ್ಧ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ಗೆ ಎದುರಾದ ಸತತ ಎರಡನೇ ಸೋಲು ಇದು. ನಡೆದ ಹಿಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 50 ರನ್ ಅಂತರದ ಸೋಲು ಕಂಡಿತ್ತು. ಮೊದಲೆರಡು ಪಂದ್ಯಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿದ್ದ ರಾಜಸ್ಥಾನ, ಮೊದಲ ಜಯ ದಾಖಲಿಸಿತು.