ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕೆರೆಯಲ್ಲಿ ಡಿ.27ರಂದು ನಡೆಯುವ 9ನೇ ವರ್ಷದ ಮಂಗಳೂರು ಕಂಬಳದಲ್ಲಿ ಬ್ಯಾಕ್ ಟು ಊರು ಪರಿಕಲ್ಪನೆಯಡಿ ತಾಯ್ನಾಡಿಗೆ ವಾಪಾಸ್ಸಾಗಿ ಉದ್ಯಮ ಸ್ಥಾಪಿಸಿರುವ ನವ ಉದ್ಯಮಿಗಳನ್ನು
ಸನ್ಮಾನಿಸುವ ಅತ್ಯಂತ ಅರ್ಥಪೂರ್ಣ ಹಾಗೂ ವಿಭಿನ್ನ ಕಾರ್ಯಕ್ರಮ ನಡೆಯಲಿದೆ.
ಈ ಬಾರಿ “ನವ ವಿಧ-ನವ ವರ್ಷ”ದ ಮಂಗಳೂರು ಕಂಬಳ ಆಗಿರುವ ಹಿನ್ನಲೆಯಲ್ಲಿ ತಮ್ಮ ತಾಯ್ನಾಡಿನ ಬಗೆಗಿನ ಅಪಾರ ಪ್ರೀತಿ ಮತ್ತು ಗೌರವದಿಂದ ಊರಿಗೆ ಮರಳಿ ಈ ನಮ್ಮ ತುಳುನಾಡಿನ ಮಣ್ಣಿನಲ್ಲೇ ಉದ್ಯಮವನ್ನು ಕಟ್ಟಿ ಬೆಳೆಸಿರುವ ನವ ಸಾಧಕ ಉದ್ಯಮಿಗಳನ್ನು ಗುರುತಿಸಿ ಅವರ ಕೊಡುಗೆಯನ್ನು ಶ್ಲಾಘಿಸಲಾಗುವುದು. ಆ ಮೂಲಕ ನಮ್ಮ ತುಳುನಾಡಿನ ಶ್ರೀಮಂತ ಜನಪದ ಕ್ರೀಡೆಯಾದ ಕಂಬಳದ ವೇದಿಕೆಯಲ್ಲೇ ಈ ಬ್ಯಾಕ್ ಟು ಊರು ಉದ್ದಿಮೆದಾರರನ್ನು ಸನ್ಮಾನಿಸುವ ಅತ್ಯಂತ ಅವಿಸ್ಮರಣೀಯ ಕ್ಷಣಕ್ಕೆ ಈ ಬಾರಿಯ ಮಂಗಳೂರು ಕಂಬಳ ಸಾಕ್ಷಿಯಾಗಲಿದೆ.
ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ಅಪಾರ ಸಾಧನೆ ಮಾಡಿ, ತಾಯ್ನಾಡಿಗೆ ಬಂದು ಸ್ವಂತ ಉದ್ಯಮ ಸ್ಥಾಪಿಸಿ, ಇಲ್ಲಿನ ಇಕೋ ವ್ಯವಸ್ಥೆಗೆ ಪೂರಕವಾಗಿ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಮೂಲಕ ನಮ್ಮೂರ ಪ್ರಗತಿಯಲ್ಲಿ ಕೈಜೋಡಿಸಬೇಕೆಂಬ ಆಶಯದೊಂದಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ʼಬ್ಯಾಕ್ ಟು ಊರುʼ ಎನ್ನುವ ವಿಭಿನ್ನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಸಂಸದ ಕ್ಯಾ.ಚೌಟ ಅವರ ಈ ಬ್ಯಾಕ್ ಟು ಊರು ಪರಿಕಲ್ಪನೆಗೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಹಲವಾರು ಉದ್ಯಮಿಗಳಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆ.
ಡಿ.27 ರಂಸು ಬೆಳಗ್ಗೆ ಮಂಗಳೂರು ಕಂಬಳಕ್ಕೆ ಚಾಲನೆ ದೊರೆಯಲಿದ್ದು, ಇದೇ ವೇದಿಕೆಯಲ್ಲಿ ಈ ಸಾಧಕರನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುತ್ತದೆ.
















