ಮಂಡೆಕೋಲು:ಹಿರಿಯರಿಂದ ಬಳುವಳಿಯಾಗಿ ಬಂದ ಸಂಸ್ಕೃತಿಯ ಭಾಗವಾದ ಅಚರಣೆಗಳನ್ನು ಎಲ್ಲಾ ಒಟ್ಟಾಗಿ ಆಚರಿಸುವುದರಿಂದ ಬದುಕಿನಲ್ಲಿ ಸಂತಸ, ನೆಮ್ಮದಿ ಉಂಟಾಗುತ್ತದೆ ಮತ್ತು ಪರಸ್ಪರ ಪ್ರೀತಿ, ವಿಶ್ವಾಸ ಐಕ್ಯತೆ ಉಂಟಾಗುತ್ತದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಭಿಪ್ರಾಯಪಟ್ಟಿದ್ದಾರೆ. ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾಗೂ
ಹಳೆ ವಿದ್ಯಾರ್ಥಿ ಸಂಘ ಜಂಟಿಯಾಗಿ ಆಯೋಜಿಸಿದ ಜಾನಪದ ಆಟಗಳು, ಜನಪದ ಕಲೆ ಮತ್ತು ಜನಪದ ಸಂಸ್ಕೃತಿ ಒಳಗೊಂಡ ‘ಆಟಿ ಸಮ್ಮಿಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು. ರೈತ ಉತ್ಪಾದಕ ಕಂಪನಿಯ ನಿರ್ದೇಶಕಿ ಮಧುರ ಜಗದೀಶ್ ‘ಆಟಿ ಅಂದು- ಇಂದು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅನಂತ ಕೃಷ್ಣ ಚಾಕೋಟೆ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ ಅತ್ಯಾಡಿ, ಗ್ರಾಮ ಪಂಚಾಯತ್ ಸದಸ್ಯೆ ಪ್ರಶಾಂತಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಿನುತಾ ಪಾತಿಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು.ಹಳೆ ವಿದ್ಯಾರ್ಥಿ ಸಂಘದ

ಕಾರ್ಯದರ್ಶಿ ಜಾನಕಿ ಕಣೆಮರಡ್ಕ ಸ್ವಾಗತಿಸಿ, ಸದಸ್ಯೆ ಸುನಿತಾ ಕಣೆಮರಡ್ಕ ವಂದಿಸಿದರು. ಆಟಿ ಸಮ್ಮಿಲನದ ಅಂಗವಾಗಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಚನ್ನಮಣೆ ಆಡುವ ಮೂಲಕ ಜನಾರ್ಧನ ಬರೆಮೇಲು ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಕರುಣಾಕರ ಗೌಡ ಪಾತಿಕಲ್ಲು ಚೆನ್ನಮಣೆ ಆಟದ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಮಕ್ಕಳಿಗೆ ಹಳೆ ವಸ್ತುಗಳ ಪ್ರದರ್ಶನ ಮತ್ತು ಮಾಹಿತಿಯನ್ನು ಶಿವರಾಮ ಮಾಸ್ತರ್ ಕೇನಾಜೆ ನಾರಾಲು ನಡೆಸಿಕೊಟ್ಟರು. ಸದಾನಂದ ಮೈತ್ತಡ್ಕ ಮತ್ತು ಬಳಗದವರು ಆಟಿ ಕಳೆಂಜ ಪ್ರದರ್ಶನ ನೀಡಿದರು.





