ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ
ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾದ ಡಾ. ಕೆ.ವಿ. ರೇಣುಕಾ ಪ್ರಸಾದ್ ಅವರು ಸಮರ್ಪಣೆ ಮಾಡಲಿದ್ದಾರೆ. ನೂತನ ರಥ ನಿರ್ಮಾಣಕ್ಕೆ ದೇವಾಲಯದ ಆಡಳಿತ ಸಮಿತಿಯಿಂದ ಅಧಿಕೃತ ಅನುಮತಿ ನೀಡಲಾಗಿದೆ, ನಿನ್ನೆ ನಡೆದ ನೂತನ ವ್ಯವಸ್ಥಾಪನಾ ಸಮಿತಿಯ
ಮೊದಲ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ರಥ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಆರಂಭವಾಗಲಿದೆ ಶಾಸ್ತ್ರೋಕ್ತ ಸಂಕಲ್ಪದೊಂದಿಗೆ ಚಾಲನೆ ನೀಡಲಾಗುವುದು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಥಶಿಲ್ಪಿ ಲಕ್ಷ್ಮೀನಾರಾಯಣಚಾರ್ಯರ ಪುತ್ರ ರಾಜಗೋಪಾಲ್ ಆಚಾರ್ ರಥ ನಿರ್ಮಾಣ ಮಾಡಲಿದ್ದಾರೆ.
ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ರಥ ನಿರ್ಮಾಣವಾಗಲಿದ್ದು ರಥವನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಿ ಮುಂದಿನ ಷಷ್ಠಿ ಜಾತ್ರೆಗೆ ದೇವರಿಗೆ ಸಮರ್ಪಿಸಲಾಗುವುದು ಎಂದು ಅವರು ತಿಳಿಸಿದರು.ಬೆಳ್ಳಿ ರಥದ ಮಾದರಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜ್, ಶಿಲ್ಪಿ ರಾಜಗೋಪಾಲ್ ಆಚಾರ್, ವಸಂತ ಕಿರಿಬಾಗ ,ದಿನೇಶ್ ಮಡ್ತಿಲ, ಸತೀಶ್ ಕುಜಗೂಡು, ಮತ್ತಿತರರು ಉಪಸ್ಥಿತರಿದ್ದರು.














