ಬೆಳಗಾವಿ:ದ.ಕ.ಜಿಲ್ಲೆಯ ವಿವಿಧ ತಾಲೂಕುಗಳ ಅರಣ್ಯದಂಚಿನ ಪ್ರದೇಶದಲ್ಲಿ 80 ಆನೆಗಳು ಸಂಚರಿಸುತ್ತಿದ್ದು ಬೆಳೆ ಹಾನಿ ಸಂಭವಿಸುತ್ತಿರುವ ಮಾಹಿತಿ ಬಂದಿದೆ.ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಂಡು,ವಸತಿ ಪ್ರದೇಶಗಳ ಬಳಿ ಆನೆ ಬಂದಾಗ ನಿಗಾ ವಹಿಸಿ, ಕೂಡಲೇ ಅವುಗಳನ್ನು ಕಾಡಿಗೆ ಮರಳಿಸಲು ಮತ್ತು ಜೀವಹಾನಿ ಆಗದಂತೆ ಎಚ್ಚರ ವಹಿಸಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ. ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ ಪ್ರದೇಶದಲ್ಲಿ ಸುಮಾರು 80 ಆನೆಗಳು ಸಂಚರಿಸುತ್ತಿದ್ದು ವ್ಯಾಪಕವಾಗಿ ಬೆಳೆ ಹಾನಿ ಸಂಭವಿಸುತ್ತಿದೆ ಎಂಬ ಮಾಹಿತಿ ಈ ಕಚೇರಿಗೆ ಬಂದಿದೆ ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.
ಲವಿಧಾನ ಪರಿಷತ್ ಸದಸ್ಯರ ಮನವಿ:
ಈ ಮಧ್ಯೆ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ,ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ದಿನೇ ದಿನೇ ತೀವ್ರಗೊಳ್ಳುತ್ತಿರುವ ಕಾಡಾನೆ ಸಮಸ್ಯೆಯ ಕುರಿತು ಚರ್ಚಿಸಿದರು. ಈ ಮೂರು ತಾಲೂಕುಗಳ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳು ನಿರಂತರವಾಗಿ ಕೃಷಿಭೂಮಿಗೆ ನುಗ್ಗಿ ಅಡಿಕೆ, ತೆಂಗು, ಬಾಳೆ ಸೇರಿದಂತೆ ಪ್ರಮುಖ ಬೆಳೆಗಳನ್ನು ನಾಶಪಡಿಸುತ್ತಿದ್ದು, ಇದರಿಂದ ಕೃಷಿಕರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ. ಅಲ್ಲದೆ, ಕಾಡಾನೆ ದಾಳಿಯಿಂದ ಕೆಲವೆಡೆ ಮಾನವ ಜೀವಹಾನಿ ಹಾಗೂ ಗಂಭೀರ ಗಾಯಗಳ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು.ಈ ಹಿನ್ನೆಲೆಯಲ್ಲಿ, ಕಾಡಾನೆ ದಾಳಿ ತಡೆಯಲು ಮತ್ತು ಕೃಷಿಕರ ಜೀವ–ಆಸ್ತಿಗೆ ರಕ್ಷಣೆ ನೀಡಲು ಜಿಲ್ಲೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಅನ್ನು ತಕ್ಷಣವೇ ಸ್ಥಾಪಿಸುವ ಅಗತ್ಯವಿದೆ ಎಂದು ಶಾಸಕರು ಒತ್ತಾಯಿಸಿದರು. ಕಾಡಂಚಿನ ಗ್ರಾಮಗಳಲ್ಲಿ ಬದುಕುತ್ತಿರುವ ಕೃಷಿಕರು ನಿರಂತರ ಭಯದಲ್ಲಿದ್ದು ಅವರ ಬದುಕಿಗೆ ಭದ್ರತೆ ಒದಗಿಸಲು ಕ್ರಮಕ್ಕೆ ಸೂಚಿಸಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಮುಂದಿನ ವಾರದಲ್ಲೇ ಎಲಿಫೆಂಟ್ ಟಾಸ್ಕ್ ಫೋರ್ಸ್ ಕಾರ್ಯಾರಂಭಗೊಳ್ಳಲಿದೆ ಎಂದು ಭರವಸೆ ನೀಡಿದರು. ಜೊತೆಗೆ, ಅಧಿವೇಶನದ ನಂತರ ಸ್ವತಃ ಸುಳ್ಯ ತಾಲೂಕಿಗೆ ಭೇಟಿ ನೀಡುವ ಯೋಜನೆಯಿದ್ದು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಕಾಡಂಚಿನ ಗ್ರಾಮಗಳ ಕೃಷಿಕರೊಂದಿಗೆ ಒಂದೇ ವೇದಿಕೆಯಲ್ಲಿ ಕೂತು ಆನೆ ನಿಗ್ರಹಕ್ಕೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರ ರೂಪಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಕಾಡಾನೆಗಳ ಚಲನವಲನ, ಹಾಟ್ಸ್ಪಾಟ್ ಪ್ರದೇಶಗಳು, ತುರ್ತು ಸ್ಪಂದನಾ ವ್ಯವಸ್ಥೆ, ಬೇಲಿ–ತಡೆಗೋಡೆ, ಬೆಳಕು ವ್ಯವಸ್ಥೆ ಹಾಗೂ ತಂತ್ರಜ್ಞಾನ ಆಧಾರಿತ ನಿಗಾವ್ಯವಸ್ಥೆ ಸೇರಿದಂತೆ ಎಲ್ಲ ಆಯಾಮಗಳನ್ನು ಒಳಗೊಂಡಂತೆ ಪರಿಣಾಮಕಾರಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಚಿವರು ಹೇಳಿದರು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರ ಕಚೇರಿ ಪ್ರಕಟಣೆ ತಿಳಿಸಿದೆ.













