ಸುಳ್ಯ:ಸುಳ್ಯ ನಗರದ ಪ್ರಮುಖ ರಸ್ತೆಯಾದ ಹಳೆಗೇಟು- ಜಯನಗರ ರಸ್ತೆಯ ದುರವಸ್ತೆಯನ್ನು ಪ್ರತಿಭಟಿಸಿ ಕೂಡಲೇ ರಸ್ತೆ ಅಭಿವೃದ್ಧಿ ಮಾಡಿ ಸಂಚಾರ ಯೋಗ್ಯವಾಗಿ ಮಾಡಬೇಕು ಎಂದು ಆಗ್ರಹಿಸಿ ಹಳೆಗೇಟು, ಜಯನಗರ ಪರಿಸರದ ಸಾರ್ವಜನಿಕರು ಜು.7ರಂದು ಪ್ರತಿಭಟನೆ ನಡೆಸಿದರು. ನಗರದ 3ನೇ ಮತ್ತು 19ನೇ ವಾರ್ಡ್ ಸಂಪರ್ಕಿಸುವ ಈ ರಸ್ತೆ ಹದಗೆಟ್ಟಿರುವುದನ್ನು
ಕೂಡಲೇ ಸರಿಪಡಿಸಬೇಕು ಎಂದು ಹೇಳಿದರು. ನಗರದ ಪ್ರಮುಖ ರಸ್ತೆ ಇದಾಗಿದ್ದು ಇದರ ಪೂರ್ತಿ ಅಭಿವೃದ್ಧಿಗೆ ನಗರ ಪಂಚಾಯತ್ ಮುಂದಾಗಬೇಕು, ಶಾಸಕರು, ಸಂಸದರು ವಿಶೇಷ ಅನುದಾನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರಮುಖರಾದ ರಾಕೇಶ್ ಕುಂಟಿಕಾನ, ಬೆಟ್ಟ ಜಯರಾಮ ಭಟ್, ಮುದ್ದಪ್ಪ ಜಯನಗರ, ರಂಜಿತ್ ಕುಮಾರ್, ಜೂಲಿಯಾ ಕ್ರಾಸ್ತಾ . ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮಾತನಾಡಿದರು.

ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್, ಅಶ್ರಫ್ ಸಂಗಮ್, ತಾರಾ ಆರ್.ರೈ, ರಾಮಚಂದ್ರ, ಪ್ರಸನ್ನ, ಸುಂದರ ಕುದ್ಪಾಜೆ, ರಮೇಶ್ ಪೂಜಾರಿ, ಶಫೀಕ್ ಜಯನಗರ, ಮಹಮ್ಮದ್ ಮುಟ್ಟತ್ತೋಡಿ, ನವಾಝ್ ಪಂಡಿತ್, ಅಬ್ದುಲ್ಲಾ ಹಾಜಿ, ಓಸಾಲ್ಡ್ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು. ಉಸ್ಮಾನ್ ಜಯನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನಾ ಕಾರರು ರಸ್ತೆ ಅವ್ಯವಸ್ಥೆಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯನ್ನು ಕೂಡಲೇ ಸರಿಪಡಿಸದಿದ್ದರೆ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಘೋಷಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ ಇದೀಗ ರಸ್ತೆಯ ಹೊಂಡ ಮುಚ್ಚಿ, ಚರಂಡಿ ರಿಪೇರಿ ಮಾಡಿ ಸಂಚಾರಕ್ಕೆ ಯೋಗ್ಯವಾಗಿಸಲಾಗುವುದು. ಮಳೆ ಕಡಿಮೆಯಾದ ಬಳಿಕ ಸಂಪೂರ್ಣ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಹಳೆಗೇಟು- ಜಯನಗರ ಪ್ರಮುಖ ರಸ್ರೆಯಾಗಿದ್ದು ನೂರಾರು ವಾಹನಗಳು ಸಂಚರಿಸುವ ರಸ್ತೆಯಾಗಿದ್ದು, ಸಾವಿರಾರು ಮಂದಿ ದಿನಾಲು ಪ್ರಯಾಣಿಸುತ್ತಾರೆ. ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು ಚರಂಡಿಗಳಿಲ್ಲದೆ ರಸ್ತೆ ಕೆಸರುಮಯವಾಗಿದೆ ಎಂದು ಸಾರ್ವಜನಿಕರು ಹೇಳಿದರು.





