ಮುಂಬೈ: ಐಪಿಎಲ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈ ತಂಡವು ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತಿದೆ. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರೀತ್ ಬೂಮ್ರಾ ಮುಂಬೈ ತಂಡಕ್ಕೆ ಮರಳಿದ್ದಾರೆ. ಅವರು ಕಣಕ್ಕಿಳಿದರೆ ಮುಂಬೈ ಬೌಲಿಂಗ್ ಪಡೆಯ ಬಲ ಮತ್ತಷ್ಟು ಹೆಚ್ಚುವುದು ಖಚಿತ.ರಜತ್ ಬಳಗವು ಟೂರ್ನಿಯಲ್ಲಿ ಆಡಿದ ಮೊದಲೆರಡು
ಪಂದ್ಯಗಳಲ್ಲಿ ಜಯಸಿತ್ತು. ಆದರೆ ಈಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಮುಗ್ಗರಿಸಿತ್ತು. ಅದರಿಂದಾಗಿ ಜಯದ ಹಾದಿಗೆ ಮರಳುವ ಒತ್ತಡವೂ ತಂಡದ ಮೇಲೆ ಇದೆ. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸ್ಫೋಟಕ ಮತ್ತು ಅನುಭವಿ ಬ್ಯಾಟರ್ಗಳಿದ್ದಾರೆ. ಆದರೆ ಬೆಂಗಳೂರಿನಲ್ಲಿ ಗುಜರಾತ್ ಬೌಲರ್ಗಳ ಎದುರು ಅಗ್ರಕ್ರಮಾಂಕದ ಬ್ಯಾಟರ್ಗಳು ವಿಫಲರಾಗಿದ್ದರು.ಅನುಭವಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ನಾಯಕ ರಜತ್ ಅವರು ದೇವದತ್ತ ಪಡಿಕ್ಕಲ್ ತಮ್ಮ ಲಯಕ್ಕೆ ಮರಳಿದರೆ ದೊಡ್ಡ ಮೊತ್ತ ಗಳಿಸುವುದು ಸುಲಭವಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಟಿಮ್ ಡೇವಿಡ್ ಅವರ ಮೇಲೆ ವಿಶ್ವಾಸವಿಡಬಹುದು. ಬೆಂಗಳೂರಿನ ಪಂದ್ಯದಲ್ಲಿಯೂ ಈ ಮೂವರು ಆಟಗಾರರೇ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದ್ದರು.
ಮುಂಬೈ ತಂಡದ ನಾಯಕ ಹಾರ್ದಿಕ್ ಕಳೆದ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ್ದರು. ಅದೇ ಲಯವನ್ನು ಇಲ್ಲಿಯೂ ಮುಂದುವರಿಸುವ ಛಲದ್ಲಿದ್ದಾರೆ. ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರ್, ವೇಗಿ ಅಶ್ವಿನಿ ಕುಮಾರ್ ಅವರೂ ಪರಿಣಾಮಕಾರಿಯಾಗಿದ್ದಾರೆ.
ಆರ್ಸಿಬಿ ಬೌಲಿಂಗ್ನಲ್ಲಿ ಜೋಷ್ ಹ್ಯಾಜಲ್ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮತ್ತು ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರ ಮುಂದೆ ಮುಂಬೈ ತಂಡದ ಉತ್ತಮ ಲಯದಲ್ಲಿರುವ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಕಟ್ಟಿಹಾಕುವ ಸವಾಲು ಇದೆ. ರೋಹಿತ್ ಶರ್ಮಾ ಗಾಯದ ಕಾರಣದಿಂದಾಗಿ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಉಭಯ ತಂಡಗಳಿಗೂ ಜಯದ ಹಳಿಗೆ ಮರಳುವ ಛಲ ಇರುವುದರಿಂದ ರೋಚಕ ಹಣಾಹಣಿಯ ನಿರೀಕ್ಷೆ ಗರಿಗೆದರಿದೆ. ಅಲ್ಲದೇ ಹೋದ ವರ್ಷ ಇಲ್ಲಿಯೇ ನಡೆದಿದ್ದ ಪಂದ್ಯದಲ್ಲಿ ಮುಂಬೈ ಎದುರು ಸೋತಿದ್ದ ಆರ್ಸಿಬಿ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ.