ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ‘ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ’ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ ರೋಚಕ ಗೆಲುವು ಸಾಧಿಸಿದೆ. ಕೈಜಾರಿದ್ದ ಗೆಲುವನ್ನು ಬೌಲರ್ಗಳ ಅಮೋಘ ಪ್ರದರ್ಶನದಿಂದ ಕೊನೇ ಕ್ಷಣದಲ್ಲಿ ಕಸಿದುಕೊಂಡಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–2 ಅಂತರದ ಸಮಬಲ ಸಾಧಿಸಿತು.ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ
ಟೀಂ ಇಂಡಿಯಾ ನೀಡಿದ್ದ 374 ರನ್ಗಳ ಕಠಿಣ ಗುರಿ ಬೆನ್ನತ್ತಿದ ಆಂಗ್ಲರ ಪಡೆ, 367 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಇದರೊಂದಿಗೆ, ಭಾರತ 6 ರನ್ ಅಂತರದ ಜಯ ಸಾಧಿಸಿತು.
ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್, 106 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಜೋ ರೂಟ್ (105 ರನ್) ಮತ್ತು ಹ್ಯಾರಿ ಬ್ರೂಕ್ (111 ರನ್), ಟೀಂ ಇಂಡಿಯಾವನ್ನು ಅಕ್ಷರಶಃ ಕಾಡಿದರು. 4ನೇ ವಿಕೆಟ್ ಪಾಲುದಾರಿಕೆಯಲ್ಲಿ 195 ರನ್ ಕೂಡಿಸಿದ ಈ ಇಬ್ಬರೂ, ಪ್ರವಾಸಿ ಪಡೆಗೆ ಸೋಲಿನ ಭೀತಿ ಮೂಡಿಸಿದ್ದರು. ಆದರೂ ಛಲ ಬಿಡದ ಟೀಂ ಇಂಡಿಯಾ ಬೌಲರ್ಗಳು, ಶತಕ ಗಳಿಸಿದ್ದ ಇವರಿಬ್ಬರು ಹಾಗೂ ಜೇಕಬ್ ಬೆಥೆಲ್ (5 ರನ್) ಅವರಿಗೆ ನಾಲ್ಕನೇ ದಿನದಾಟದ ಕೊನೆಯಲ್ಲಿ ಪೆವಿಲಿಯನ್ ದಾರಿ ತೋರಿದರು. ಆ ಮೂಲಕ
ಪಂದ್ಯವನ್ನು ತಮ್ಮತ್ತ ಎಳೆದುಕೊಂಡರು.ಮಂದ ಬೆಳಕಿನ ಕಾರಣ ದಿನದಾಟ ಬೇಗನೆ ನಿಂತಾಗ ಆಂಗ್ಲರ ತಂಡದ ಮೊತ್ತ 6 ವಿಕೆಟ್ಗೆ 339 ರನ್ ಆಗಿತ್ತು. ಹೀಗಾಗಿ, ಪಂದ್ಯ ಗೆಲ್ಲಲು ಅಂತಿಮ ದಿನ ಆತಿಥೇಯರಿಗೆ 35 ರನ್ ಮತ್ತು ಭಾರತಕ್ಕೆ 4 ವಿಕೆಟ್ ಅವಶ್ಯಕತೆ ಇತ್ತು.
ದಿನದಾಟದ ಆರಂಭದಲ್ಲೇ ಜೆಮೀ ಸ್ಮಿತ್ ಹಾಗೂ ಜೆಮೀ ಓವರ್ಟನ್ ಅವರನ್ನು ಸಿರಾಜ್ ಪೆವಿಲಿಯನ್ಗೆ ಅಟ್ಟಿದರು. ಜೋಶ್ ಟಂಗ್ ಅವರನ್ನು ಪ್ರಸಿದ್ಧ ಕೃಷ್ಣ ಕ್ಲೀನ್ ಬೌಲ್ಡ್ ಮಾಡಿದರು. ಹೀಗಾಗಿ, ಗಾಯಾಳು ಕ್ರಿಸ್ ವೋಕ್ಸ್ ಕ್ರೀಸ್ಗಿಳಿಯಬೇಕಾಯಿತು. ಅವರು ‘ಒಂಟಿ’ ಕೈಯಲ್ಲಿ ಬ್ಯಾಟ್ ಹಿಡಿದು ಒಂದು ತುದಿಯಲ್ಲಿ ನಿಂತರೂ ಬೇಕಿದ್ದ ಎಲ್ಲ ರನ್ಗಳನ್ನು ಗಳಿಸಲು ಗಸ್ ಅಟ್ಕಿನ್ಸನ್ ಅವರಿಗೆ ಸಾಧ್ಯವಾಗಲಿಲ್ಲ.
ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 5 ವಿಕೆಟ್ ಕಬಳಿಸಿದರೆ, ಪ್ರಸಿದ್ಧ ಕೃಷ್ಣ ನಾಲ್ಕು ಮತ್ತು ಆಕಾಶ್ ದೀಪ್ ಒಂದು ವಿಕೆಟ್ ಪಡೆದರು.





