ಸುಳ್ಯ:ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಇದರ ಪಂಜ ಹೋಬಳಿ ಘಟಕದ ಆಶ್ರಯದಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ಹಿರಿಯ ಸಾಹಿತಿ, ಸಂಶೋಧಕರಾದ ಎ.ಕೆ.ಹಿಮಕರ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನ.16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ನಡೆಯಲಿದೆ ಎಂದು ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಹಾಗೂ ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ತಿಳಿಸಿದರು.ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ
ಅವರು ಬೆಳಿಗ್ಗೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ. ಬೆಳ್ಯಪ್ಪ ಗೌಡ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ಸುಮಿತ್ರ ಮೂಕಮಲೆ ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ಸುಳ್ಯ ಶಾಸಕಿ ಕು.ಭಾಗಿರಥಿ ಮುರುಳ್ಯ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ. ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ, ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬಳಿಕ ಹಿರಿಯ ಸಾಹಿತಿ ಎ.ಕೆ. ಹಿಮಕರ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಾಹಿತಿ, ಸಂಶೋಧಕರಾದ ಡಾ. ಪುರುಷೋತ್ತಮ ಕೆ. ವಿ ಕರಂಗಲ್ಲು ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಹೊಸ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಭಾಗವಹಿಸಲಿದ್ದಾರೆ. ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಸಂಪಾದಕತ್ವದ ಸಂತೆಯಲ್ಲಿ ಸಾಗುತ್ತಿರುವ ನಾವು ಪುಸ್ತಕ ಬಿಡುಗಡೆಗೊಳ್ಳಲಿದೆ.
ಮಧ್ಯಾಹ್ನ ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಶಾಸ್ತ್ರಿ ಆಚಳ್ಳಿ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಟಿ ನಡೆಯಲಿದೆ. ಗೋಷ್ಟಿಯಲ್ಲಿ ಕೃಷಿ ವಿಜ್ಞಾನಿ ಡಾ. ಬಿ.ಕೆ. ವಿಶು ಕುಮಾರ್, ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಧೀರೇನ್ ಪರಮಲೆ ವಿಚಾರ ಮಂಡಿಸಲಿದ್ದಾರೆ. ಬಳಿಕ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಗೀತ ಗಾಯನ ಕಾರ್ಯಕ್ರಮ, ವಿದ್ಯಾರ್ಥಿ ಕವಿಗೋಷ್ಠಿ ನಡೆಯಲಿದೆ.
ಸಂಜೆ ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಮತ್ತು ಸಿರಿಗನ್ನಡ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಮುಖ್ಯ ಗುರು ರಾಮಕೃಷ್ಣ ಭಟ್ ಚೊಕ್ಕಾಡಿ ಸಮಾರೋಪ ಭಾಷಣ ಮಾಡಲಿದ್ದಾರೆ. ಸಹಕಾರ ರತ್ನ ಪುರಸ್ಕೃತ ನಿತ್ಯಾನಂದ ಮುಂಡೋಡಿ, ಸಾಮಾಜಿಕ ಮುಖಂಡ ಚಂದ್ರಶೇಖರ ತಳೂರು ಸಾಧಕರನ್ನು ಸನ್ಮಾನಿಸಲಿದ್ದಾರೆ.

ಈ ಸಂದರ್ಭದಲ್ಲಿ ಎಚ್ ಬಿ ರಾಧಾಕೃಷ್ಣ( ಕ್ರೀಡೆ), ವಸಂತಕುಮಾರ್ ಕಮಿಲ ಬೆಂಗಳೂರು (ಸಮಾಜಸೇವೆ), ಉಮೇಶ ಬಿಳಿಮಲೆ (ಸಾಹಿತ್ಯ), ಶಿವರಾಮ ಕುಂಞÂಟ್ಟಿ( ಸಾಹಿತ್ಯ), ವೇಣುಗೋಪಾಲ ದೇರಪ್ಪಜ್ಜನ ಮನೆ( ಕ್ರೀಡೆ ಮತ್ತು ಕಲಾಪೋಷಕ), ಶಿವರಾಮ ಕಲ್ಮಡ್ಕ (ರಂಗಭೂಮಿ), ಬೊಳಿಯ ಅಜಿಲ ಮತ್ತು ಚಿದಾನಂದ ಅಡ್ಡನಪಾರೆ( ಭೂತಾರಾಧನೆ), ರಚನಾ ಚಿದ್ಗಲ್ಲು ( ವಿದ್ಯಾರ್ಥಿ ಪ್ರತಿಭೆ-ಕಲೆ) ಉಲ್ಲಾಸ್ ಕಜ್ಜೋಡಿ ಮತ್ತು ನಿರಂಜನ ಕಡ್ಲಾರ್ ( ಯುವ ಪ್ರತಿಭೆ), ದೇವಿ ಪ್ರಸಾದ್ ಚಿಕ್ಮುಳಿ (ಯುವ ಉದ್ಯಮಿ) ಇವರಿಗೆ ಸಿರಿಗನ್ನಡ ಸನ್ಮಾನ ನಡೆಯಲಿದೆ. ಅಲ್ಲದೇ ಸಮಾಜ ಸೇವಾ ತಂಡಗಳಾದ ಅಮರ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಯುವ ತೇಜಸ್ಸು ಟ್ರಸ್ಟ್ ಪಂಜ, ಪುಸ್ತಕದ ಗೂಡು ಹಾಲೆಮಜಲು, ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು, ವಿಪತ್ತು ನಿರ್ವಹಣಾ ತಂಡ ಗುತ್ತಿಗಾರು ಇವರಿಗೆ ಸನ್ಮಾನ ನಡೆಯಲಿದೆ ಎಂದು ವೆಂಕಟ್ ದಂಬೆಕೋಡಿ ಹಾಗೂ ಬಾಬು ಗೌಡ ಅಚ್ರಪ್ಪಾಡಿ ಹೇಳಿದರು.
ಕಸಾಪ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು,ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಸಂಘಟನಾ ಸಮಿತಿಯ ಪದಾಧಿಕಾರಿಗಳಾದ ಕೇಶವ ಹೆಚ್.ಬಿ. ಹೊಸೋಳಿಕೆ, ವೆಂಕಪ್ಪ ಕೇನಾಜೆ, ಕುಶಾಲಪ್ಪ ತುಂಬತ್ತಾಜೆ, ಪ್ರಭಾಕರ ಕಿರಿಭಾಗ, ಯೋಗೀಶ್ ಹೊಸೋಳಿಕೆ, ದಿನೇಶ್ ಹಾಲೆಮಜಲು, ಉಪಸ್ಥಿತರಿದ್ದರು.












