ಮಡಿಕೇರಿ:ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ‘ಅರೆಭಾಷೆ ‘ಅಧ್ಯಯನ ಪೀಠ’ವು ಈಗಾಗಲೇ ಆರಂಭವಾಗಿದ್ದು, ಅರೆಭಾಷೆಯ ಹಲವು ಚಟುವಟಿಕೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ 5 ಕೋಟಿ ರೂ ಬಿಡುಗಡೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ
ಕುಶಾಲನಗರ, ಆಲೂರು ಸಿದ್ದಾಪುರ, ಸುಂಟಿಕೊಪ್ಪ, ಗುಡ್ಡೆಹೊಸೂರು, ನಂಜರಾಯಪಟ್ಟಣ, ಚೆಟ್ಟಳ್ಳಿ, ಪಿರಿಯಾಪಟ್ಟಣ, ಸೋಮವಾರಪೇಟೆ ಹಾಗೂ ಯಡವಾರೆ ಗೌಡ ಸಮಾಜಗಳ ಸಹಕಾರದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಭಾನುವಾರ ನಡೆದ ‘ಅರೆಭಾಷೆ ಗಡಿನಾಡ ಉತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅರೆಭಾಷೆ ಮಾತನಾಡುವವರ ನಿಖರ ಜನಸಂಖ್ಯೆ ಹಾಗೂ ಸ್ಥಳನಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತಾಗಬೇಕು. ರಾಷ್ಟ್ರದಲ್ಲಿ 19,250 ಹೆಚ್ಚು ತಾಯಿ ನುಡಿ ಭಾಷೆಗಳಿವೆ, ಹಾಗೆಯೇ ರಾಜ್ಯದಲ್ಲಿ 230 ಕ್ಕೂ ಹೆಚ್ಚು ಸಣ್ಣ ಭಾಷೆಗಳು ಇದ್ದು, ಇವುಗಳನ್ನು ಉಳಿಸಬೇಕು. ಮುಂದಿನ 30 ವರ್ಷದಲ್ಲಿ

172 ಕ್ಕೂ ಹೆಚ್ಚು ಸಣ್ಣ ಭಾಷೆಗಳು ನಶಿಸುವ ಬಗ್ಗೆ ಅಪಾಯ ಎಂದು ಡಾ.ಪುರುಷೋತ್ತಮ ಬಿಳಿಮಲೆ ಅವರು ಆತಂಕ ವ್ಯಕ್ತಪಡಿದರು. ಸಣ್ಣ ಸಣ್ಣ ಭಾಷೆ ಮಾತನಾಡಬೇಕು ಮತ್ತು ಮಾತೃ ಭಾಷೆ ಉಳಿಸಬೇಕುಇದು ಒಂದು ರೀತಿ ದೊಡ್ಡ ಸವಾಲು ಆಗಿದೆ ಎಂದರು. ಶಾಸಕರಾದ ಡಾ.ಮಂತರ್ ಗೌಡ, ವಿಧಾನಸಭಾ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಮಾತನಾಡಿ ಮುಂದಿನ ವರ್ಷದಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು, ಹಿಂಗಾರ ತ್ರೈಮಾಸಿಕ ತರಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾರರಾಗಬೇಕು ಎಂದರು.ಅರೆಭಾಷಿಕರ ಜನಗಣತಿ ಹಾಗೂ ಸ್ಥಳನಾಮ ಸಂಬಂಧ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಸದಾನಂದ ಮಾವಜಿ ಅವರು ತಿಳಿಸಿದರು.

ಪಿರಿಯಾಪಟ್ಟಣ ಗೌಡ ಸಮಾಜದ ಅಶ್ವಿನಿಕುಮಾರ್ ಅವರು ಮಾತನಾಡಿದರು.ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.ಸಭಾ ಕಾರ್ಯಕ್ರಮಕ್ಕೂ ಮೊದಲು ಕೊಪ್ಪ ಗೇಟ್ ಬಳಿ ತಾಯಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಚಾಲನೆ ನೀಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್, ದೇವಾಯಿರ ಗಿರೀಶ್, ಕುಂಜಿಲನ ಮಂಜುನಾಥ್, ಗುಡ್ಡೆಮನೆ ವಿಶುಕುಮಾರ್, ಬಾರನ ಭರತ್,ಅಕಾಡೆಮಿ ಸದಸ್ಯರಾದ ಪೊನ್ನಚ್ಚನ ಮೋಹನ್, ಸಂದೀಪ್ ಪೂಳಕಂಡ, ಚಂದ್ರಶೇಖರ ಪೇರಾಲು, ತೇಜಕುಮಾರ್ ಕುಡಕಲ್ಲು, ಡಾ.ಎನ್.ಎ.ಜ್ಞಾನೇಶ್, ಚಂದ್ರಾವತಿ ಬಡ್ಡಡ್ಕ, ಪಿ.ಎಸ್.ಕಾರ್ಯಪ್ಪ, ಲತಾ ಪ್ರಸಾದ್ ಕುದ್ಪಾಜೆ, ಸೂದನ ಈರಪ್ಪ, ವಿನೋದ್ ಮೂಡಗದ್ದೆ, ಲೋಕೇಶ್ ಊರುಬೈಲು, ಕುದ್ಪಾಜೆ ಪ್ರಕಾಶ್, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇತರರು ಇದ್ದರು.