ಮಂಗಳೂರು: ಪ್ರಕೃತಿ ಉಳಿಸಲು, ಪ್ರಾಕೃತಿಕ ಸಮಸ್ಯೆಗಳನ್ನು ಎದುರಿಸಲು ಕಾಡು ಬೆಳೆಸುವುದು, ಪ್ರಕೃತಿಯನ್ನು ಪ್ರೀತಿಸುವುದು ಮಾತ್ರ ಪರಿಹಾರ ಎಂದು ಖ್ಯಾತ ಪರಿಸರ ತಜ್ಞ,ಗುಜರಾತ್ನ ಸ್ಮತಿ ವನದ ರುವಾರಿ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಹೇಳಿದ್ದಾರೆ.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ಪ್ರೆಸ್ಕ್ಲಬ್ ಅತಿಥಿಯಾಗಿ ಭಾಗವಹಿಸಿ ಗೌರವ ಸ್ವೀಕರಿಸಿ, ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅನುಭವಗಳನ್ನು ತೆರೆದಿಟ್ಟರು.
ಕರಾವಳಿಯ ಪ್ರಮುಖ ಸಮಸ್ಯೆಯಾಗಿರುವ
ಕಡಲ್ಕೊರೆತ ತಡೆಗೆ ಸಮುದ್ರದ ಬದಿ ಕಾಡು ನಿರ್ಮಾಣ ಮಾಡುವುದರಿಂದ ಪರಿಹಾರ ಸಾಧ್ಯ, ಪ್ರಕೃತಿಯ ವಿರುದ್ಧ ಮನುಷ್ಯ ಹೋರಾಟ ಮಾಡಲು ಸಾಧ್ಯವಿಲ್ಲ. ಪೂರಕ ಚಟುವಟಿಕೆ ಕೈಗೊಂಡಾಗ ಪ್ರಕೃತಿ ಸ್ಪಂದಿಸುತ್ತದೆ ಎಂದರು. ಮರ, ಪಕ್ಷಿಗಳೊಂದಿಗೆ ಪ್ರಕೃತಿಯೊಂದಿಗೆ ನಾವು ಮಾತನಾಡಬೇಕು. ಮರ ಮಾತನಾಡುವುದು ನಮಗೆ ಕೇಳಿಸದಿರಬಹುದು. ಆದರೆ ನಮ್ಮ ಮಾತನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತದೆ. ಹೂ, ಹಣ್ಣು ನೀಡದ ಮರದ ಬಳಿ ಮುಂದಿನ ವರ್ಷ ಫಲ ನೀಡದಿದ್ದರೆ ಬೇರೆ ಗಿಡ ತಂದು ಇಲ್ಲಿಯೇ ನೆಡುತ್ತೇನೆ ಎಂದರೆ, ಮರುವರ್ಷ ಬೇಕಾದಷ್ಟು ಫಲ ನೀಡುತ್ತದೆ. ನಾನು ನಿರ್ಮಾಣ ಮಾಡಿದ ಮಿಯಾವಾಕಿ ಕಾಡಿನೊಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಪಕ್ಷಿಗಳು ಹಾರಿ ಬಂದು ಚಿಲಿಪಿಲಿಗೈಯ್ಯುತ್ತಾ ಸ್ವಾಗತಿಸುತ್ತವೆ. ಅವುಗಳ ಜತೆ ಮಾತನಾಡಿದ ಬಳಿಕವೇ ಅಲ್ಲಿಂದ ತೆರಳುತ್ತವೆ ಎಂದು ಪರಿಸರದ ಜತೆಗಿನ ಬಾಂಧವ್ಯವವನ್ನು ಡಾ.ಆರ್.ಕೆ.ನಾಯರ್ ವಿವರಿಸಿದರು.

121 ಮಿಯಾವಾಕಿ ಕಾಡು:
ದೇಶದ 12 ರಾಜ್ಯಗಳಲ್ಲಿ 121 ಮಿಯಾವಾಕಿ ಕಾಡು ನಿರ್ಮಾಣ ಮಾಡಲಾಗಿದೆ. 32 ಲಕ್ಷಕ್ಕಿಂತಲೂ ಅಧಿಕ ಗಿಡಗಳನ್ನು ನೆಡಲಾಗಿದೆ. ಮರಳಿನಲ್ಲೂ ಗಿಡ ನೆಟ್ಟು ಕಾಡು ಬೆಳೆಸಿದ್ದೇವೆ. ರಾಜಸ್ಥಾನದಲ್ಲಿ ಮರಳುಗಾಡಿನಲ್ಲಿ ಗಿಡ ಬೆಳೆಸಲು ಸಾಧ್ಯವಿಲ್ಲ ಎಂದು ಅಲ್ಲಿನ ಜನ ಸವಾಲು ಹಾಕಿದ್ದರು. ಆದರೆ ಅಲ್ಲಿ ಕಾಡು ಬೆಳೆಸಿ ತೋರಿಸಿದ್ದೇವೆ. ಗುಜರಾತ್ನ ಭುಜ್ನಲ್ಲಿ ನಿರ್ಮಿಸಿದ ಸ್ಮತಿ ವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಇಲ್ಲಿ 5.25 ಲಕ್ಷ ಗಿಡಗಳನ್ನು ನೆಡಲಾಗಿದೆ. ಎರಡನೇ ಹಂತದಲ್ಲಿ 12 ಲಕ್ಷ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರಾಕೃತಿಕವಾಗಿ ಹಲವಾರು ಬಗೆಯ ಮೀನುಗಳು, ಪ್ರಾಣಿ, ಪಕ್ಷಿಗಳು ಈ ಕಾಡಿನಲ್ಲಿ ಸ್ವಚ್ಛಂದವಾಗಿ ಬದುಕುತ್ತಿವೆ ಎಂದರು.
ಪಿಯುಸಿ ಫೇಲ್ ಸಾಧನೆಗೆ ಪ್ರೇರಣೆ: ಕೇರಳದಿಂದ ಬಂದು ಸುಳ್ಯದ ಜಾಲ್ಸೂರು ಬಳಿ ಕಾಡಿನ ಬದಿ ವಾಸ ಮಾಡಿಕೊಂಡಿದ್ದ ನಮ್ಮ ಕುಟುಂಬದ ಜೀವನೋಪಾಯ ಕೂಲಿ ಕೆಲಸವಾಗಿತ್ತು. ಮೂಲ ಬದುಕನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಎಲ್ಲೇ ಹೋದರೂ ಹಾಳೆಯ ಮುಟ್ಟಾಳೆ ಧರಿಸುತ್ತಿದ್ದೇನೆ. ಪಿಯುಸಿ ಫೇಲಾದ ಬಳಿಕ 1989ರಲ್ಲಿ

ಉದ್ಯೋಗ ಅರಸಿ ಸ್ನೇಹಿತನೊಂದಿಗೆ ಮುಂಬೈಗೆ ತೆರಳಿದ್ದೆ. ಅಲ್ಲಿ ಮೆಡಿಕಲ್, ಹೋಟೆಲ್ನಲ್ಲಿ ಒಂದಷ್ಟು ಕಾಲ ಕೆಲಸ ಮಾಡಿದೆ. ನಂತರ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಅಲ್ಲಿ ಉತ್ತಮ ಹುದ್ದೆಗೇರಿ ಗುಜರಾತ್ಗೆ ತೆರಳಿದೆ. ಅಲ್ಲಿ ಸ್ವಲ್ಪ ಕಾಲದ ಬಳಿಕ ಸ್ವಂತ ಗಾರ್ಮೆಂಟ್ಸ್ ಉದ್ಯಮ ತೆರೆದು ಮುನ್ನಡೆಸಿಕೊಂಡು ಬರುತ್ತಿದ್ದೇನೆ. ಪತ್ನಿ, ಪುತ್ರ, ಸೊಸೆ ಈ ಉದ್ಯಮವನ್ನು ವಿಸ್ತರಿಸಿಕೊಂಡು ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ನಾನು ಕಾಡು ಬೆಳೆಸುವುದರಲ್ಲೇ ತೊಡಗಿದ್ದೇನೆ ಎಂದು ಬದುಕಿನ ವೃತ್ತಾಂತ ಬಿಚ್ಚಿಟ್ಟರು.
ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಉಪಸ್ಥಿತರಿದ್ದರು. ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.