ಧರ್ಮಸ್ಥಳ:ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತದ ಸರ್ವಧರ್ಮಗಳೂ ಸತ್ಯ, ಅಹಿಂಸೆ, ಪರೋಪಕಾರ, ಸೇವೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ವಿಶ್ವವೇ ಒಂದು ಕುಟುಂಬ ಎಂದು ಭಾವಿಸುವ ವಿಶಾಲ ಮನೋಭಾವ ನಮ್ಮದು .ಮಾನವ ಸೇವೆಯೇ ಶ್ರೇಷ್ಠ ಧರ್ಮ ಎಂದು ಸಚಿವ ಡಾ.ಎಂ.ಬಿ. ಪಾಟೀಲ್ ಹೇಳಿದರು.ಅವರು ಮಂಗಳವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ
ಸರ್ವಧರ್ಮ ಸಮ್ಮೇಳನದ ತೊಂಭತ್ತಮೂರನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಧರ್ಮವನ್ನು ಪ್ರೀತಿಸಿ ಅನುಷ್ಠಾನಗೊಳಿಸುವದರೊಂದಿಗೆ ಇತರರ ಧರ್ಮವನ್ನೂ ಗೌರವಿಸುವುದು ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ಜೀವಾಳವಾಗಿದೆ.ಸರ್ವಧರ್ಮ ಸಮನ್ವಯ ಕೇಂದ್ರವಾಗಿ ಸರ್ವಧರ್ಮೀಯರಿಗೂ ಸೇವೆ ನೀಡುವ ಧರ್ಮಸ್ಥಳ ಅನುಪಮ ಶ್ರದ್ಧಾ-ಭಕ್ತಿಯ ಕೇಂದ್ರವಾಗಿದೆ ಅವರು ಹೇಳಿದರು.ಸಮಾಜ ಸೇವೆಯೊಂದಿಗೆ ಪರಿಸರ ಸಂರಕ್ಷಣೆಯನ್ನೂ ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.

ಪ್ರಾಸ್ತಾವಿಕ ಮಾತುಗಳೊಂದಿಗೆ ಸರ್ವರನ್ನೂ ಸ್ವಾಗತಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು
ಮಾನವೀಯತೆಯೇ ಸಕಲ ಧರ್ಮಗಳ ಸಾರವಾಗಿದೆ. ಮಾನವನು ತನ್ನ ಜೀವನದಲ್ಲಿ ನೈತಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಉನ್ನತವಾದ ಆದರ್ಶ ಬದುಕನ್ನು ನಡೆಸಲು ದಾರಿ ತೋರುವುದೇ ಧರ್ಮದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಧರ್ಮವು ಸತ್ಯದ ಹುಡುಕಾಟದೊಂದಿಗೆ ವಿಶ್ವಸಾಮರಸ್ಯವನ್ನು ಮೂಡಿಸಬೇಕು.ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಾನವೀಯತೆ ಹಾಗೂ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಹೆಗ್ಗಡೆಯವರು, ಧರ್ಮವು ಮಾನವನ ಜೀವನದ ಅಸ್ತಿತ್ವಕ್ಕೆ ಆಧಾರವಾಗಿದ್ದು, ಧರ್ಮದ ಅನುಷ್ಠಾನದಿಂದ ಸಮಾಜದಲ್ಲಿ ದ್ವೇಷ, ಹಿಂಸೆ ಮತ್ತು ಅಸಮಾನತೆ ನಿವಾರಣೆಯಾಗಿ ಮನುಷ್ಯತ್ವವು ದೈವತ್ವದ ಕಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹೇಮಾವತಿ ಹೆಗ್ಗಡೆಯವರು ಮಂಜುವಾಣಿ ಮಾಸಪತ್ರಿಕೆಯಲ್ಲಿ ಪ್ರಕಟಿಸಿದ “ಮಗಳಿಗೊಂದು ಪತ್ರ” ಅಂಕಣ ಬರಹಗಳ ಸಂಕಲವನ್ನು ಸಚಿವ ಡಾ. ಎಂ.ಬಿ. ಪಾಟೀಲ್ ಬಿಡುಗಡೆಗೊಳಿಸಿದರು.
ಡಿ. ವೀರೇಂದ್ರ ಹೆಗ್ಗಡೆಯವರ ಅಂಕಣ ಬರಹಗಳ ಸಂಗ್ರಹ “ಧರ್ಮದರ್ಶನ” ವನ್ನು ಪೂಜ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಅಧ್ಯಕ್ಷತೆ ವಹಿಸಿದ ಹರಿಹರಪುರದ ಪೂಜ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವೈವಿಧ್ಯತೆಯನ್ನು ನಾವು ಸಹಜವಾಗಿ ಸ್ವೀಕರಿಸಿ, ಹೃದಯದಿಂದ ಒಪ್ಪಿ ಸಮನ್ವಯ ದೃಷ್ಠಿಕೋನದಿಂದ ಮಾನವೀಯತೆ ಮೂಲಕ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಿದರೆ ಸುಖ-ಶಾಂತಿ, ನೆಮ್ಮದಿಯ ಸಾರ್ಥಕ ಜೀವನ ಸಾಧ್ಯವಾಗುತ್ತದೆ ಎಂದರು. ಮಾನವೀಯತೆ ಮೂಲಕ ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಪ್ರಜಾವಾಣಿ ಪತ್ರಿಕೆಯ ಉಪಸಂದಾಕ ಎಸ್. ಸೂರ್ಯಪ್ರಕಾಶ್ ಪಂಡಿತ್ ಮಾತನಾಡಿ, ಸನಾತನ ಧರ್ಮವು ಶಾಶ್ವತವೂ, ನೂತನವೂ ಆಗಿದ್ದು ಸರ್ವರಿಗೂ ಸಾಮರಸ್ಯಕ್ಕೆ ಸಮಾನ ಅವಕಾಶ ನೀಡುತ್ತದೆ. ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಬಂದ ಅಂಕಣಕಾರ ತನ್ವೀರ್ ಅಹಮ್ಮದ್ ಉಲ್ಲಾ ಮಾತನಾಡಿ ಸತ್ಯಮೇವಜಯತೇ ಎನ್ನುವಂತೆ ಸತ್ಯ ಯಾವಗಲೂ ಗೆಲ್ಲುತ್ತದೆ, ಸುಳ್ಳು ಸೋಲುತ್ತದೆ ಎಂದರು.ಪ್ರೀತಿ, ಪ್ರೇಮ, ನಂಬಿಕೆ ಮತ್ತು ವಿಶ್ವಾಸ ಇದ್ದಲ್ಲಿ ಸತ್ಯ ಮತ್ತು ಧರ್ಮ ನೆಲೆಸಿರುತ್ತದೆ.
ಪಾದಯಾತ್ರೆ ತನಗೆ ಅಮೂಲ್ಯ ಜೀವನಪಾಠ ಕಲಿಸಿದೆ. ಹತ್ತು ಸಾವಿರ ಮಂದಿಯನ್ನು ಪಾದಯಾತ್ರೆಯಲ್ಲಿ ತಾನು ಭೇಟಿಯಾಗಿ ಅಪಾರ ಲೋಕಾನುಭವ ಪಡೆದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಪೂರನ್ ವರ್ಮ ಉಪಸ್ಥಿತರಿದ್ದರು.
ಬೆಳಾಲು ತಿಮ್ಮಪ್ಪ ಗೌಡ ಧನ್ಯವಾದವಿತ್ತರು. ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.













