ನವದೆಹಲಿ: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಮ್ಮ ತಂದೆ-ತಾಯಿ ಜತೆಗೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಕ್ಯಾ. ಚೌಟ ಅವರು ತಮ್ಮ ತಂದೆ ಸೇಸಣ್ಣ ಚೌಟ ಹಾಗೂ ತಾಯಿ ಪುಷ್ಪಾ ಚೌಟ ಅವರೊಂದಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕ್ಯಾ. ಚೌಟ ಅವರು ತುಳುನಾಡಿನ

ಸಂಸ್ಕೃತಿಯ ಸಂಕೇತವಾಗಿರುವ ಪಿಲಿ ನಲಿಕೆಯಲ್ಲಿ ಪ್ರಧಾನವಾಗಿರುವ ‘ಪಿಲಿ ಮಂಡೆ’ ( ಹುಲಿ ವೇಷದ ಮುಖವಾಡ)ಯನ್ನು ಸ್ಮರಣಿಕೆ ರೂಪದಲ್ಲಿ ಪ್ರಧಾನಿಯವರಿಗೆ ನೀಡಿದರು. ಜತೆಗೆ, ಮಂಗಳೂರು ಕಂಬಳದ ಪೋಟೋ ಫ್ರೇಮ್ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದ ಪ್ರಸಾದವನ್ನು ಕೂಡ ನೀಡಿದರು.
ಭೇಟಿ ಬಳಿಕ ಪ್ರತಿಕ್ರಿಯಿಸಿರುವ ಸಂಸದ ಕ್ಯಾ ಚೌಟ, ” ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನನ್ನ ಹೆತ್ತವರ ಜತೆಗೆ ಭೇಟಿ ಮಾಡುವ ಅವಕಾಶ ಲಭಿಸಿರುವುದು ಬದುಕಿನಲ್ಲಿನ ಬಹಳ ಖುಷಿಯ ಹಾಗೂ ಸಂತೃಪ್ತಿಯ ಭಾವವನ್ನು ಮೂಡಿಸಿದೆ. ಅವರೊಂದಿಗಿನ ಈ ಭೇಟಿ ವೇಳೆ ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ನಮ್ಮ ಕರಾವಳಿ ಬಗೆಗಿನ ಕಲೆ-ಸಂಸ್ಕೃತಿ, ಪರಂಪರೆ ಬಗ್ಗೆ ಅವರಿಗಿರುವ ಅಗಾಧ ಜ್ಞಾನವು ನನಗೆ ಬಹಳ ಸ್ಫೂರ್ತಿ ಹಾಗೂ ಹೆಮ್ಮೆಯ ಕ್ಷಣವಾಗಿ ಬಹಳ ಕಾಲ ನೆನೆಪಿನಲ್ಲಿ ಉಳಿಯುವಂತೆ ಮಾಡಿದೆ.ಈ ಭೇಟಿ ವೇಳೆ ಪ್ರಧಾನಮಂತ್ರಿ ಮೋದಿ ಅವರು ವಿಕಸಿತ ಮಂಗಳೂರು ನಿರ್ಮಾಣಕ್ಕೆ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಅನುಕರಿಸುವ ಬಗ್ಗೆಯೂ ವಿಚಾರ-ವಿನಿಮಯ ಮಾಡಿದ್ದಾರೆ. ಮಂಗಳೂರನ್ನು ಗುಜರಾತ್ ಮಾದರಿ ಅಭಿವೃದ್ಧಿಪಡಿಸುವುದಕ್ಕೆ ಮೋದಿ ಅವರ ಮಾರ್ಗದರ್ಶನವನ್ನು ಕೋರಿರುವುದಾಗಿ ತಿಳಿಸಿದರು.