ಸುಳ್ಯ:ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿವಿಧ ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳಿಗೆ ನೀಡುವ ತರಬೇತಿಯ ಅಂಗವಾಗಿ ತಂಡವು ಸುಳ್ಯದ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಜೇನು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿತು.ನಬಾರ್ಡ್ನ ತರಬೇತಿ ಸಂಸ್ಥೆಯಾದ ಬಿಐಆರ್ಡಿ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ
‘ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹಸಿರು ಹಣಕಾಸು’ಕುರಿತ ಮೂರು ದಿನಗಳ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಈ ತರಬೇತಿ ಕಾರ್ಯಕ್ರಮವು ಕೃಷಿ ಕ್ಷೇತ್ರದಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ವಿಧಾನಗಳು ಹಾಗೂ ಹಸಿರು ಹಣಕಾಸು ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾಗಿದೆ.ಬಿಐಆರ್ಡಿ ಡಿಜಿಎಂ ಆಗಿರುವ ಶಿಲಾ ಎಂ. ಭಂಡಾರ್ಕರ್ ನೇತೃತ್ವದಲ್ಲಿ ಭಾಗವಹಿಸುವ ಎಫ್ಪಿಒ ಪ್ರತಿನಿಧಿಗಳಿಗೆ ಹವಾಮಾನ ಸ್ನೇಹಿ ಕೃಷಿ ಪದ್ಧತಿಗಳು, ಶಾಶ್ವತ ಕೃಷಿ ಮಾದರಿಗಳು ಹಾಗೂ ಹಸಿರು ಹಣಕಾಸು ಯೋಜನೆಗಳ ಕುರಿತು ಪರಿಣಿತರಿಂದ ಮಾರ್ಗದರ್ಶನ ನೀಡಲಾಗುತ್ತಿದೆ. ಇದರ ಭಾಗವಾಗಿ ಇಂದು ತಂಡವು ಜೇನು ಸಹಕಾರಿ ಸಂಘಕದ ಘಟಕಕ್ಕೆ ಭೇಟಿ ನೀಡಿತು.

ಈ ಸಂದರ್ಭದಲ್ಲಿ ಜೇನು ಸಾಕಾಣಿಕೆ ವಿಧಾನಗಳು, ಜೇನು ಸಂಗ್ರಹಣೆ ಹಾಗೂ ಸಂಸ್ಕರಣಾ ಘಟಕದಲ್ಲಿ ಉತ್ಪಾದನೆಯಾಗುವ ವಿವಿಧ ಜೇನು ಉತ್ಪನ್ನಗಳ ಬಗ್ಗೆ ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ, ಸುಪ್ರೀತ್ ಮೋoಟಡ್ಕ ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶೀಲಾ ಎಂ. ಭಂಡಾರ್ಕರ್ ರೈತರಿಂದ ಖರೀದಿಸಲಾದ ಜೇನು ಉತ್ಪನ್ನಗಳನ್ನು ರೈತರು ಈ ಸಂಸ್ಥೆಯ ಮೂಲಕವೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲಿದೆ. ಅದನ್ನು ಸಂಸ್ಕರಿಸಿ ಮಾರುಕಟ್ಟೆಗೆ ತಲುಪಿಸುವಂತಹ ಉತ್ತಮ ಘಟಕಗಳು ಬೇರೆಡೆಗಳಲ್ಲಿ ಅಪರೂಪವಾಗಿವೆ. ಈ ಸಂಸ್ಥೆಯ ಕಾರ್ಯವಿಧಾನ ಅತ್ಯುತ್ತಮವಾಗಿದ್ದು, ಇಲ್ಲಿ ನಾವು ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಪಡೆದಿದ್ದೇವೆ. ಸುಮಾರು 30 ಮಂದಿ ತರಬೇತಿ ಭಾಗವಹಿಸುವವರನ್ನು ಇಂದು ಈ ಘಟಕಕ್ಕೆ ತರಲಾಗಿದೆ. ಮುಂದೆಯೂ ಇಂತಹ ಸಂಸ್ಥೆಗಳ ಮಾಹಿತಿ ಇತರ ಕಡೆಗಳಿಗೂ ಹಂಚಲಾಗುವುದು ಎಂದು ಅವರು ಹೇಳಿದರು.









