ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವ ವಿಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್(73) ಅವರು ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು
ಕೊನೆಯುಸಿರೆಳೆದಿದ್ದಾರೆ .ಜಾಕಿರ್ ಹುಸೇನ್ ಅವರು ಭಾರತ ಸೇರಿದಂತೆ ವಿಶ್ವದಲ್ಲಿಯೇ ತಬಲಾ ವಾದನವನ್ನು ಪ್ರಖ್ಯಾತಿಗೆ ತಂದರು. ಹುಸೇನ್ ತಮ್ಮ ವೃತ್ತಿಜೀವನದಲ್ಲಿ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ 66 ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಮೂರು ಪ್ರಶಸ್ತಿ ಗೆದ್ದಿದ್ದರು.ತಾಳವಾದ್ಯ ಮಾಂತ್ರಿಕ ಹುಸೇನ್ ಅವರು, ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿದ್ದು, ಅವರಿಗೆ 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ.