ಧರ್ಮಸ್ಥಳ: ಮಹಿಳೆಯರಲ್ಲಿ ಅಪಾರ ಶಕ್ತಿ-ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ವ್ಯವಹಾರ ಕೌಶಲವಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಉತ್ತಮ ಅವಕಾಶ, ಪ್ರೇರಣೆ ಮತ್ತು ನಿರಂತರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು, ಬುಧವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಉದ್ದಿಮೆದಾರರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಬಲೀಕರಣ ಅಂದರೆ ಮಹಿಳೆಯರಲ್ಲಿ ಇರುವ ತಮ್ಮ ಶಕ್ತಿ-ಸಾಮರ್ಥ್ಯ ಮತ್ತು ಕೌಶಲದ ಬಗ್ಯೆ ಅರಿವು, ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ.
ಮಹಿಳಾ ಸಬಲೀಕರಣದ ಮೂಲಕ ಫಲಾನುಭವಿಗಳ ಕುಟುಂಬದವರ ಭಾಗ್ಯದ ಬಾಗಿಲು ತೆರೆದಿದ್ದು ಎಲ್ಲರೂ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಮೃತ ಜೀವನ ಪ್ರಯಾಸ್ ಚಿಂತನ ಕೃತಿಯನ್ನು ಬಿಡುಗಡೆ ಮಾಡಿದ ಸಿಡ್ಬಿ ಅಧ್ಯಕ್ಷ ಶಿವಸುಬ್ರಹಮಣ್ಯ ರಾಮನ್ ಒಂದು ಸಾವಿರ ಕೋಟಿ ರೂ. ಸಾಲ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥರಿಗೆ ನೀಡಿದರು.
ಸಿಡ್ಬಿಯ ಪ್ರಯಾಸ್ ಯೋಜನೆಯಡಿಯಲ್ಲಿ ಉದ್ದಿಮೆ ಮಾಡುವವರಿಗೆ ಕಡಿಮೆ ಬಡ್ಡಿದರದಲ್ಲಿ ಬೇಕಾದಷ್ಟು ಸಾಲ ನೀಡಲಾಗುತ್ತದೆ ಎಂದರು.
ಮಂಗಳೂರಿನ ಅನಂತ ಭಟ್, ಡ್ಯಾಫಿನಿಸ್ಟೆಲ್ಲಾ ಡಿ’ಸೋಜಾ, ಸಿರಿ ಸಂಸ್ಥೆಯ ಪ್ರಸನ್ನ ತೆರಿಗೆ ಪಾವತಿ ಮತ್ತು ಲೆಕ್ಕಪತ್ರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಹೇಮಾವತಿ ವೀ. ಹೆಗ್ಗಡೆ, ಸಿಡ್ಬಿಯ ಮುಖ್ಯ ಮಹಾಪ್ರಬಂಧಕ ರವಿತ್ಯಾಗಿ ಮತ್ತು ಉಪಮಹಾಪ್ರಬಂಧಕ ನಿತಿನ್ ಶುಕ್ಲಾ ಉಪಸ್ಥಿತರಿದ್ದರು.
ಬಂಟ್ವಾಳದ ಮಹಿಳಾ ಉದ್ಯಮಿ ಮಾತನಾಡಿದರು.350 ಮಹಿಳಾ ಉದ್ಯಮಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಶಿವಾನಂದ ಆಚಾರ್ಯ ಧನ್ಯವಾದವಿತ್ತರು. ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.