ಪೆರಾಜೆ:ಪೆರಾಜೆ ಗ್ರಾಮದ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾ.3ರಿಂದ 5ರವರೆಗೆ ಮೂರು ದಿನಗಳ ಕಾಲ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ನಡೆಯಲಿದೆ. ಇಲ್ಲಿ ಪ್ರಥಮ ಬಾರಿಗೆ ನಡೆಯುವ ಮಹೋತ್ಸವಕ್ಕೆ ಅದ್ದೂರಿ ಸಿದ್ಧತೆ ನಡೆಸಲಾಗಿದೆ. ತಳಿರು ತೋರಣಗಳಿಂದ, ಬ್ಯಾನರ್, ಬಂಟಿಂಗ್ಸ್, ವರ್ಣಮಯ ಲೈಟಿಂಗ್ಸ್ಗಳಿಂದ ಶೃಂಗರಿಸಲಾಗಿದ್ದು ಊರಿಗೇ ಅಲಂಕಾರಗೊಂಡಿದೆ. ಅಲ್ಲಲ್ಲಿ ಸ್ವಾಗತ ಕಮಾನುಗಳು, ದ್ವಾರಗಳು ಸಿದ್ಧಪಡಿಸಿದ್ದು ಭಕ್ತರನ್ನು ಸ್ವಾಗತಿಸುತಿದೆ. ಪೆರಾಜೆ ಗ್ರಾಮವೇ ದೈವಕಟ್ಟು
ಮಹೋತ್ಸವಕ್ಕೆ ಅಣಿಯಾಗಿದೆ ಮಾ.3ರಂದು ಬೆಳಗ್ಗೆ ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಿಂದ ಹಸಿರುವಾಣಿ ಮೆರವಣಿಗೆ ಹೊರಡುವುದು. ಬಳಿಕ ಉಗ್ರಾಣ ಮುಹೂರ್ತ (ಕಲವರ ನಿರಕ್ಕಲ್) ನಡೆಯುವುದು.ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ಸಂಜೆಯಿಂದ ದೈವಿಕ ಕಾರ್ಯಕ್ರಮಗಳು ಆರಂಭಗೊಳ್ಳುವುದು. ರಾತ್ರಿ ಕೈವಿದ್, ದೈವಗಳ ಕೂಡುವಿಕೆ, ಶ್ರೀ ಪೊಟ್ಟನ್ ದೈವ ನಡೆಯುವುದು.

ಮಾ.4ರಂದು ಶನಿವಾರ ಬೆಳಗ್ಗೆಯಿಂದ ದೈವಗಳ ಮಹೋತ್ಸವ ನಡೆಯಲಿದ್ದು ಬೆಳಗ್ಗೆ 7ರಿಂದ ಕೊರತಿಯಮ್ಮ ದೈವ, ಚಾಮುಂಡಿ ದೈವ, ಬಳಿಕ ವಿಷ್ಣುಮೂರ್ತಿ ದೈವ, ಮಧ್ಯಾಹ್ನ ಗುಳಿಗ ದೈವದ ಕೋಲ, ಸಂಜೆ 3 ರಿಂದ ಕಾರ್ನೋನ್ ದೈವದ ವೆಳ್ಳಾಟ್ಟಂ, ಕೋರಚ್ಛನ್ ದೈವದ ವೆಳ್ಳಾಟ್ಟಂ, ರಾತ್ರಿ ಕಂಡನಾರ್ ಕೇಳನ್ ದೈವದ ವೆಳ್ಳಾಟ್ಟಂ, ವಿಷ್ಣುಮೂರ್ತಿ ದೈವದ ಆರಂಭ, ರಾತ್ರಿ 1ಗಂಟೆಗೆ ವಯನಾಟ್ ಕುಲವನ್ ದೈವದ ವೆಳ್ಳಾಟ್ಟಂ ನಡೆಯಲಿದೆ. ಮಾ.5ರಂದು ಬೆಳಗ್ಗೆ 7ರಿಂದ ಕಾರ್ನೊನ್ ದೈವ, 9 ರಿಂದ ಕೊರಚ್ಛನ್ ದೈವ, 11 ರಿಂದ
ಕಂಡನಾರ್ ಕೇಳನ್ ದೈವ, ಅಪರಾಹ್ನ 2 ರಿಂದ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ, ಅಪರಾಹ್ನ 3 ರಿಂದ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ, ರಾತ್ರಿ ಮರ ಪಿಳರ್ಕಲ್, ನಂತರ ಕೈವೀದ್ ನಡೆಯಲಿದೆ.ಮೂರು ದಿನಗಳ ಕಾಲ ನಿರಂತರ ಅನ್ನದಾನ ನಡೆಯಲಿದೆ.

ಮಾ.3ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆಯು ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ನೀಲೇಶ್ವರದ ಬ್ರಹ್ಮಶ್ರೀ ವೇದಮೂರ್ತಿ ಉಚ್ಛಿಲತ್ತಾಯ ಪದ್ಮನಾಭ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡುವರು. ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಕೊಡಗು – ಮೈಸೂರು ಸಂಸದ ಪ್ರತಾಪಸಿಂಹ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ಮಡಿಕೇರಿ ತಾಲೂಕು ಅಕ್ರಮ – ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ಸಮಿತಿ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ವಯನಾಟ್ ಕುಲವನ್ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ತಂಬುರಾಟಿ ಭಗವತೀ ಕ್ಷೇತ್ರ ಕುತ್ತಿಕೋಲು ಆಡಳಿತ ಸಮಿತಿ ಅಧ್ಯಕ್ಷ ಕುಂಞಿಕಣ್ಣ ಬೇಡಗಂ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಿವಾಕರ ರೈ ಪೆರಾಜೆ ಭಾಗವಹಿಸಲಿದ್ದಾರೆ.

3 ದಿನಗಳ ದೈವಕಟ್ಟು ಮಹೋತ್ಸದ ಸಂದರ್ಭದಲ್ಲಿ 50 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ವಿಶಾಲವಾದ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಈ ಉತ್ಸವದ ಸಂದರ್ಭದಲ್ಲಿ ಬೆಳಗ್ಗೆ ಉಪಹಾರ, ಹಾಗೂ, ಮಧ್ಯಾಹ್ನ, ರಾತ್ರಿ ಅನ್ನದಾನ ಸೇವೆ ನಡೆಯುವುದು.ಮಹೋತ್ಸವದ ಯಶಸ್ವಿಗೆ ಊರಿನ ಜನರು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
