ಉಬರಡ್ಕ:ಆನೆ ಹಾಗೂ ಇತರ ವನ್ಯ ಪ್ರಾಣಿಗಳ ದಾಳಿಯಿಂದ ಹಾನಿಗೊಳಗಾಗಿರುವ ಉಬರಡ್ಕ- ಮಿತ್ತೂರು ಮತ್ತು ಮರ್ಕಂಜ ಗ್ರಾಮದ ರೆಂಜಾಳದ ಕೃಷಿಕರು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಂವಾದ ನಡೆಸಿದರು.ಉಬರಡ್ಕ ಸಿಎ ಬ್ಯಾಂಕ್ ಸಭಾಂಗಣ ಮತ್ತು ಮರ್ಕಂಜದ ರೆಂಜಾಳ ವಿನಾಯಕ ಸಭಾಭವನದಲ್ಲಿ ನಡೆಯಿತು. ಹಲವು ಮಂದಿ ಕೃಷಿಕರು ತಮ್ಮ ಕೃಷಿ ಹಾನಿಯಾಗಿರುವ ಬಗ್ಗೆ
ಅಧಿಕಾರಿಗಳ ಮತ್ತು ಶಾಸಕರ ಗಮನಕ್ಕೆ ತಂದರು. ಸರಕಾರದಿಂದ ಸಿಗುವ ಸವಲತ್ತುಗಳು, ಪರಿಹಾರಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಈಗಾಗಲೇ ಮೂರು ಬಾರಿ ಅರಣ್ಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಸೋಲಾರ್ ಬೇಲಿ ನಿರ್ಮಾಣಕ್ಕೆ ಈಗ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಶೇಕಡಾ 90%ಕ್ಕೆ ಏರಿಸಬೇಕೆಂದು ಮನವಿಸಲ್ಲಿಸಲಾಗಿದೆ, ಹಾನಿಗೆ ಪರಿಹಾರ ಮೊತ್ತ ಹೆಚ್ಚಿಸುವಂತೆ ಮತ್ತು ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ನಮ್ಮ ಮನವಿಗೆ ಸಚಿವರು ಸ್ಪಂದಿಸುವ ಭರವಸೆ ಇದೆ ಎಂದರು. ಉಬರಡ್ಕ ಸೊಸೈಟಿಯಿಂದ ಮತ್ತು ರೆಂಜಾಳದಲ್ಲಿ ಕೃಷಿಕರ ವತಿಯಿಂದ ಮನವಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ವಲಯ ಎಸಿಎಫ್ ಪ್ರಶಾಂತ್ ಕುಮಾರ್ ಪೈ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೊಡು, ಉಪಾಧ್ಯಕ್ಷೆ ಚಿತ್ರಾ ಕುಮಾರಿ, ಸದಸ್ಯ ಪ್ರಶಾಂತ ಪಾನತ್ತಿಲ, ಸಿಎ ಅಧ್ಯಕ್ಷ ದಾಮೋದರ ಮದುವೆಗದ್ದೆ, ಮರ್ಕಂಜ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ,ಸಿಎ ಬ್ಯಾಂಕ್ ಸಿಒ ಜಯಪ್ರಕಾಶ ಉರುಂಡೆ, ಹಾಗೂ ಕೃಷಿಕರು ಉಪಸ್ಥಿತರಿದ್ದರು.





