ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರ್ ಸುರಂಗದೊಳಗೆ ಸಿಲುಕಿದ್ದ ಎಲ್ಲಾ 41 ಕಾರ್ಮಿಕರನ್ನು ಸುರಕ್ಷಿತವಾಗಿ ಸುರಂಗದಿಂದ ಇಂದು ಹೊರಕರೆತರಲಾಗಿದೆ. 17 ದಿನಗಳ ನಿರಂತರ ಶ್ರಮ ಮತ್ತು ಅಸಂಖ್ಯಾತ ಜನಗಳ ಪ್ರಾರ್ಥನೆಗೆ ಫಲ ಸಿಕ್ಕಿದ್ದು, ಬಹುದೊಡ್ಡ ರಕ್ಷಣಾ ಕಾರ್ಯಾಚರಣೆ ಯಶಸ್ಸು ಸಾಧಿಸಿದೆ. ಸುಮಾರು 50 ಮೀಟರ್ಗೂ ಅಧಿಕ ದೂರದಲ್ಲಿ ಸುರಂಗದ ಒಳಗಡೆ ಸಿಲುಕಿದ್ದ ಎಲ್ಲ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಪೈಪ್ ಮೂಲಕ
ಗಾಲಿ ಸ್ಟ್ರೆಚರ್ ಸಹಾಯದಿಂದ ರಕ್ಷಣಾ ತಂಡಗಳು ಹೊರಗೆಳೆದು ರಕ್ಷಣೆ ಮಾಡಿದವು. ಹೊರಗೆ ಬಂದ ಕಾರ್ಮಿಕರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ಅಡಿಯಲ್ಲಿ ದೇಹ ಪರೀಕ್ಷೆ ಮಾಡಿ ತಕ್ಷಣ ಆಂಬ್ಯುಲೆನ್ಸ್ಗಳ ಸಹಾಯದಿಂದ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎಲ್ಲ ಕಾರ್ಮಿಕರು ಆರೋಗ್ಯಯುತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತೀ ಹಂತದಲ್ಲೂ ನಾಲ್ಕು ನಾಲ್ಕು ಕಾರ್ಮಿಕರನ್ನು ಹೊರಗೆ ಕರೆತರಲಾಯಿತು. ಕಾರ್ಮಿಕರ ರಕ್ಷಣೆಗೆ ಶತಕೋಟಿ ಭಾರತೀಯರು ಪ್ರಾರ್ಥಿಸಿದ್ದರು. ಎಲ್ಲರ ಪ್ರಾರ್ಥನೆ ಇಂದು ಫಲಿಸಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾರ್ಮಿಕರು ಹೊರಗೆ ಬರುತ್ತಿದ್ದಂತೆ ಸುತ್ತಲೂ ಜೈಕಾರಗಳು ಮೊಳಗಿದವು ಮತ್ತು ಸ್ಥಳದಲ್ಲಿ ನೆರೆದಿದ್ದ ಜನರು ಸಿಹಿ ಹಂಚಿ ಸಂಭ್ರಮಿಸಿದರು. ನುರಿತ ಕಾರ್ಮಿಕರ ತಂಡವು ಇಲಿ-ಕುಳಿ ಗಣಿಗಾರಿಕೆ ತಂತ್ರವನ್ನು ಬಳಸಿಕೊಂಡು ಕೈಯಿಂದ ರಂಧ್ರ ಕೊರೆಯುವ ಮೂಲಕ ಅಂತಿಮ ಹಂತದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಯಿತು. 800-ಎಂಎಂ ವ್ಯಾಸದ ಪೈಪ್ ಅನ್ನು ಆಗರ್ ಯಂತ್ರದಿಂದ ಅವಶೇಷಗಳ ಮೂಲಕ ಸೇರಿಸಲಾಗಿದ್ದು, ಅದರ ಮೂಲಕ ಕಾರ್ಮಿಕರನ್ನು ಹೊರಗೆ ಕರೆತರಲಾಗಿದೆ. ಈ ಮೊದಲು ಬೃಹತ್ ಆಗರ್ ಯಂತ್ರದ ಮೂಲಕ ಈ ಕೊರೆತವನ್ನು ನಡೆಸಲಾಗಿತ್ತು. ಆದರೆ, ಕಳೆದ ಶುಕ್ರವಾರ ಈ ಯಂತ್ರವು 47 ಮೀಟರ್ನಲ್ಲಿ ಅವಶೇಷಗಳಡಿ ಸಿಲುಕಿ ಛಿದ್ರವಾಗಿತ್ತು.
ಕುಸಿದ ಸುರಂಗದಲ್ಲಿ ಕಳೆದ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು ದೊಡ್ಡ ಪೈಪ್ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಒಬ್ಬೊಬ್ಬರಾಗಿ ಹೊರಗೆಳೆದು ರಕ್ಷಣೆ ಮಾಡಲಾಯಿತು. ಗಾಲಿ ಸ್ಟ್ರೆಚರ್ ಸಹಾಯದಿಂದ ಹೊರಗೆ ಕರೆತರಲಾಯಿತು. ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು.