ಸುಳ್ಯ: ಸುಳ್ಯದಲ್ಲಿ ಕಳೆದ 6 ಬಾರಿ ಶಾಸಕರಾಗಿ ಸಚಿವರಾಗಿರುವ ಅಂಗಾರರ ವಿರುದ್ಧ ಸುಳ್ಯದ ಕಾಂಗ್ರೆಸಿಗರಿಗೆ ಕಳೆದ 30 ವರ್ಷಗಳಿಂದ ಯಾವುದೆಲ್ಲಾ ಸರ್ಕಸ್ ಮಾಡಿದರೂ ಗೆಲ್ಲಲು ಸಾಧ್ಯವಾಗಿಲ್ಲ.ಮುಂದೆಯೂ ಗೆಲ್ಲಲು ಸಾಧ್ಯವಿಲ್ಲ ಎಂದು ಸುಳ್ಯ ನಗರ ಬಿಜೆಪಿ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ ಹಾಗು ಸಿಎ ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ “ಸುಳ್ಯದ ಜನತೆ ಅಂಗಾರರನ್ನು 1994ರಿಂದಲೂ ನಿರಂತರ ಗೆಲ್ಲಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್ಸಿಗರು
ಚುನಾವಣೆ ಸಮಯದಲ್ಲಿ ಅನಗತ್ಯ ನಾಟಕವಾಡಲು ಹೊರಟಿದ್ದಾರೆ. ನಗರ ಪಂಚಾಯತ್ಲ್ಲಿ 20 ರಲ್ಲಿ ಕೇವಲ 4 ಸ್ಥಾನ ಹೊಂದಿರುವ ಕಾಂಗ್ರೆಸ್ ನಾಯಕರು ತಮ್ಮ ಸ್ಥಾನ ಎಲ್ಲಿದೆ ಎನ್ನುವುದನ್ನು ಪುನರ್ ಯೋಚಿಸಬೇಕಿದೆ. ಅಂಗಾರರು ಶಾಸಕರಾದ ಬಳಿಕದ ಅಭಿವೃದ್ಧಿ ಕಾರ್ಯಗಳು ಜನರ ಕಣ್ಣ ಮುಂದೆಯೇ ಇವೆ. ಸುಳ್ಯದ ಸರಕಾರಿ ಬಸ್ನಿಲ್ದಾಣ , ಕೆಎಸ್ಆರ್ಟಿಸಿ ಬಸ್ ಡಿಪೋ , ಅಗ್ನಿ ಶಾಮಕ ಠಾಣೆ , ಪಿಡಬ್ಲ್ಯೂಡಿ ಸಬ್ ಡಿವಿಶನ್ , ಸುಳ್ಯಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು – ಇದೆಲ್ಲವೂ ಅಂಗಾರರ ದೂರದೃಷ್ಟಿಯ ಅಭಿವೃದ್ಧಿ ಯೋಜನೆಗಳೇ ಆಗಿವೆ . ಬಹುತೇಕ ರಸ್ತೆಗಳಿಂದು ಅಗಲಗೊಂಡು ಅಭಿವೃದ್ಧಿಗೊಂಡಿವೆ. ಸುಳ್ಯ ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿಶೇಷ ಅನುದಾನ 3 ಕೋಟಿ , 14 ನೇ ಹಣಕಾಸು ಮತ್ತು 15 ನೇ ಹಣಕಾಸು ನಿಧಿಯ 1.5 ಕೋಟಿ ಮತ್ತು ಪಂಚಾಯತ್ ನಿಧಿಯಲ್ಲಿ 2 ಕೋಟಿ ಸೇರಿದಂತೆ 6.5 ಕೋಟಿಗೂ ಹೆಚ್ಚು ಕಾಮಗಾರಿ ನಡೆದಿರುತ್ತದೆ. ಪ್ರಸಕ್ತ ವರ್ಷದಲ್ಲಿಯೂ ಒಟ್ಟು 4.25 ಕೋಟಿಯ ಕಾಮಗಾರಿಗಳು ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಹಿಂದಿನ ಬಿಜೆಪಿ ಸರಕಾರವು ನಗರಾಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದು ನಗರಗಳ ಅಭಿವೃದ್ಧಿಗೆ ಅನುದಾನ ನೀಡಿತ್ತು. ಆದರೆ ಕಾಂಗ್ರೆಸ್ ಸರಕಾರವು ನಗರಾಭಿವೃದ್ಧಿಗೆ ಚಿಕ್ಕಾಸನ್ನೂ ನೀಡದೆ ಅಭಿವೃದ್ಧಿಯನ್ನು ಕುಂಠಿತಗೊಳಿಸಿತ್ತು. ಇದೀಗ ಮತ್ತೆ ಬೊಮ್ಮಾಯಿ ಸರಕಾರದಲ್ಲಿ ಪ್ರತಿ ನಗರ ಪಂಚಾಯತ್ಗೂ 5 ಕೋಟಿ ಅನುದಾನ ನೀಡುವ ಮೂಲಕ ನಗರಗಳ ಮೂಲ ಸೌಕರ್ಯ ಅಭಿವೃದ್ಧಿಗೆ
ಒತ್ತು ನೀಡಿದ್ದಾರೆ. ನಗರ ಪಂಚಾಯತ್ನಲ್ಲಿ ಕೆಲವು ವಿಪಕ್ಷ ಸದಸ್ಯರು ಶಾಸಕರು ಸಾಮಾನ್ಯ ಸಭೆಗೆ ಬರುತ್ತಿಲ್ಲವೆನ್ನುವ ಎನ್ನುವ ನೆವವೊಡ್ಡಿ ಸಚಿವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿ ಕಪ್ಪು ಪಟ್ಟಿ ಧರಿಸುವ ನಾಟಕವಾಡುತ್ತಿದ್ದಾರೆ. ಶಾಸಕರು ಪಂಚಾಯತ್ ಸಾಮಾನ್ಯ ಸಭೆಗೆ ವಿಶೇಷ ಆಹ್ವಾನಿತರೇ ಹೊರತು ಅವರ ಹಾಜರಿ ಕಡ್ಡಾಯವಲ್ಲ ಈಗ ಅಂಗಾರರು ಸಚಿವರಾಗಿ ರಾಜ್ಯದ ಜವಾಬ್ದಾರಿ ಹೊಂದಿದ್ದು ವಿಪಕ್ಷ ಸದಸ್ಯರು ಪ್ರತಿಭಟನೆಯ ನಾಟಕವಾಡುವುದರಿಂದ ಮತದಾರರ ಮನ ಗೆಲ್ಲಲು ಸಾಧ್ಯವಿಲ್ಲ .ಶಾಸಕರಾಗಿ ,ಸಚಿವರಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಏನು ಬೇಕಾಗಿದೆಯೋ ಅದನ್ನವರು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ,ಸುಳ್ಯ ಸಿ ಎ ಬ್ಯಾಂಕ್ ಮಾಜಿ ಅಧ್ಯಕ್ಷ ಹರೀಶ್ ಬುಡುಪನ್ನೆ, ನ.ಪಂ.ಸದಸ್ಯ ಬುದ್ಧ ನಾಯ್ಕ್, ನಾಮನಿರ್ದೇಶಿತ ಸದಸ್ಯ ರೋಹಿತ್ ಕೊಯಿಂಗೋಡಿ, ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ
ಸುನಿಲ್ ಕೇರ್ಪಳ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ
ಮಹೇಶ್ ಕುಮಾರ್ ಮೇನಾಲ ಶಕ್ತಿ ಕೇಂದ್ರದ ಪ್ರಮುಖರಾದ ಕೇಶವ ಮಾಸ್ತರ್ ಉಪಸ್ಥಿತರಿದ್ದರು.