ಸುಳ್ಯ:ಜಾತ್ಯಾತೀತ ತತ್ವ, ಭಾಷೆ, ಸಂಸ್ಕೃತಿಯಲ್ಲಿನ ವೈವಿಧ್ಯತೆ, ಆ ವೈವಿಧ್ಯತೆಯಲ್ಲಿಯೂ ಏಕತೆಯನ್ನು ಕಾಣುವುದು ನಮ್ಮ ದೇಶದ ವಿಶೇಷತೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಿ ಪ್ರತಿಯೊಬ್ಬರಿಗೂ ಬೆಳೆಯಲು ಅವಕಾಶ ನೀಡುವ ಮೂಲಕ ನಮ್ಮ ಭಾಷೆ, ಸಂಸ್ಕೃತಿಯ ವೈವಿಧ್ಯತೆಯನ್ನೂ ಪೋಷಿಸಬೇಕು ಎಂದು ಕೇರಳ ಸರಕಾರದ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವರಾದ ಅಹಮ್ಮದ್ ದೇವರಕೋವಿಲ್ ಹೇಳಿದ್ದಾರೆ.ಅರಂತೋಡಿನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನದ ವತಿಯಿಂದ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ತೆಕ್ಕಿಲ್ ಮಹಮ್ಮದ್ ಹಾಜಿ ಅವರ 50ನೇ ಪುಣ್ಯ ಸ್ಮರಣೆ ಪ್ರಯುಕ್ತ

ಪ್ರತಿಷ್ಠಾನದ ವತಿಯಿಂದ ಒಂದು ವರ್ಷದಲ್ಲಿ ಹಮ್ಮಿಕೊಳ್ಳುವ 50 ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ವಧರ್ಮ ಸಮನ್ವಯತೆ, ಮಾನವೀಯತೆಗೆ ಮಾದರಿಯಾಗಿ ಬದುಕಿದ್ದವರು ತೆಕ್ಕಿಲ್ ಮೊಹಮ್ಮದ್ ಹಾಜಿ. ಅವರು ಅಗಲಿ 50 ವರ್ಷಗಳ ಬಳಿಕವೂ ಅವರನ್ನು ಎಲ್ಲರೂ ನೆನಪಿಸಿ ಗೌರವಿಸುವುದು ಅವರಿಗೆ ಈ ಸಮಾಜ ನೀಡುವ ಗೌರವಕ್ಕೆ ಸಾಕ್ಷಿ. ಮೊಹಮ್ಮದ್ ಹಾಜಿಯವರ ಪರಂಪರೆಯನ್ನು ಮುಂದುವರಿಸಿ ಟಿ.ಎಂ.ಶಹೀದ್ ನೇತೃತ್ವದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಜಾತಿ, ಧರ್ಮ,ಭೇಧ ಇಲ್ಲದೆ ಎಲ್ಲರಿಗೂ ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆ ನೀಡುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ‘ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಇನ್ನಷ್ಟು ಸೇವಾ ಕಾರ್ಯ ನಡೆಸಲು ಸಾಧ್ಯವಾಗಲಿ ಎಂದು ಶುಭ ಹಾರೈಸಿದರು
ತೆಕ್ಕಿಲ್ ಮೊಹಮ್ಮದ್ ಹಾಜಿ ಅನುಸ್ಮರಣಾ ಭಾಷಣ ಮಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ಆರ್.ಗಂಗಾಧರ ಮಾತನಾಡಿ ತೆಕ್ಕಿಲ್ ಮೊಹಮ್ಮದ್ ಹಾಜಿಯವರು ಕೃಷಿ, ಉದ್ಯಮ ನಡೆಸಿ ಯಶಸ್ವಿಯಾಗಿರುವುದರ ಜೊತೆಗೆ ಇಲ್ಲಿ ಸಾಮಾಜಿಕ, ಧಾರ್ಮಿಕ ನಾಯಕರಾಗಿ ಬೆಳೆದಿದ್ದರು. ಕೊಡುಗೈ ದಾನಿಯಾಗಿ ಹೆಸರು ಮಾಡಿದ್ದರು.ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿಗೆ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರ ಅಭಿನಂದನಾ ಭಾಷಣ ಮಾಡಿದ ಎಂ.ಬಿ.ಫೌಂಡೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿ’ ಸ್ಪೀಕರ್ ಆಗಿ ಯು.ಟಿ.ಖಾದರ್ ಅವರು ಸದನಕ್ಕೆ ಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಲ್ಲರ ಜೊತೆ ಬೆರೆಯುವ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುವ ಗುಣ ಅವರಿಗಿದೆ.ತನ್ನ ಕ್ಷೇತ್ರದ ಅಭಿವೃದ್ಧಿ ಮಾಡುವುದರ ಜೊತೆಗೆ ಸಚಿವರಾಗಿದ್ದ ಸಂದರ್ಭದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಅವರು ಹೇಳಿದರು.

ತಾಲೂಕಿನ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಸಾಧಕ ವಿಧ್ಯಾರ್ಥಿಗಳನ್ನು ಕರ್ನಾಟಕ ಲೋಕಸಭಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ಗೌರವಿಸಿದರು. ತೆಕ್ಕಿಲ್ ಪ್ರತಿಷ್ಠಾನದ ನವೀಕರಣಗೊಂಡ ಕಚೇರಿಯನ್ನು ಸಚಿವ ಅಹಮ್ಮದ್ ದೇವರಕೋವಿಲ್ ಉದ್ಘಾಟಿಸಿದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಅತಿಥಿಗಳಾಗಿ ಸುಳ್ಯ ತಹಶೀಲ್ದಾರ್ ಮಂಜುನಾಥ್,ಸಂಪಾಜೆಯ ಸಂತ ಪ್ರಾನ್ಸಿಸ್ ಚರ್ಚ್ನ ಧರ್ಮಗುರುಗಳಾದ ಫಾ.ಫೌಲ್ ಕ್ರಾಸ್ತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧನಂಜಯ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಇಸಾಕ್ ಸಾಹೇಬ್ ಪಾಜಪಳ್ಳ, ಕೆ.ಎಂ.ಮುಸ್ತಫ, ಸಂಪಾಜೆ ಗ್ರಾಂ.ಪಂ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ,
ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ತರ್, ಉದ್ಯಮಿ

ಮೊಯಿದೀನ್, ಪ್ರಮುಖರಾದ ಸಮದ್ ನರಿಪಟ್ಟ, ಸದಾನಂದ ಮಾವಜಿ, ಕೆ.ಟಿ.ವಿಶ್ವನಾಥ, ಕೆ.ಆರ್.ಜಗದೀಶ್ ರೈ, ಶರೀಫ್ ಕಂಠಿ, ಮೂಸಾ ಕಂಞಿ ಪೈಂಬೆಚ್ಚಾಲ್, ಸಿದ್ದಿಕ್ ಕೊಕ್ಕೊ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಇಬ್ರಾಹಿಂ ಚೊಕ್ಕಾಡಿ, ನಿವೃತ್ತ ಪ್ರಾಂಶುಪಾಲ ಉಮ್ಮರ್,
ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಸಮಿತಿ ಅಧ್ಯಕ್ಷ ಉನೈಸ್ ಪೆರಾಜೆ, ಮುಖ್ಯೋಪಾಧ್ಯಾಯ ಸಂಪತ್, ತೆಕ್ಕಿಲ್ ಕುಟುಂಬಸ್ಥರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಚೊಕ್ಕಾಡಿ. ಟಿ.ಎಂ.ಖಾಲಿದ್, ಟಿ.ಎಂ.ಜಾವೇದ್ ತೆಕ್ಕಿಲ್, ಟಿ.ಎಂ.ಶಮೀರ್ ತೆಕ್ಕಿಲ್, ಟಿ.ಎಂ.ಶಾಝ್ ತೆಕ್ಕಿಲ್, ಸಾದಿಕ್ ಮಾಸ್ತರ್, ತಾಜ್ ಮಹಮ್ಮದ್ ಸಂಪಾಜೆ ಮತ್ತಿತರರು ಉಪಸ್ಥಿತರಿದ್ದರು. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭಕ್ಕೆ ಮುನ್ನ ಪೇರಡ್ಕ ಮಸೀದಿ ವಠಾರದಲ್ಲಿ ತೆಕ್ಕಿಲ್ ಮೊಹಮ್ಮದ್ ಹಾಜಿ ಮತ್ತು ಕುಟುಂಬಸ್ಥರ ಖಬರ್ ಝಿಯಾರತ್ ಮತ್ತು ಮೌಲೂತ್ ಪಾರಾಯಣ ನಡೆಯಿತು. ಸಚಿವ ಅಹಮ್ಮದ್ ದೇವರಕೋವಿಲ್ ಪೇರಡ್ಕಕ್ಕೆ ಭೇಟಿ ನೀಡಿದರು. ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ಗೆ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರು ಬೆಳಿಗ್ಗೆ ತೆಕ್ಕಿಲ್ ನಿವಾಸಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ತುರ್ತು ಕಾರ್ಯಕ್ರಮದ ನಿಮಿತ್ತ ತೆರಳಿದರು.