ಸುಳ್ಯ: ಪುಂಜಾಲಕಟ್ಟೆಯ ಸ್ವಸ್ತಿಕ್ ಪ್ರಂಡ್ಸ್ ಕ್ಲಬ್ ನೀಡುವ ರಾಜ್ಯ ಮಟ್ಟದ ಪ್ರತಿಷ್ಠಿತ ‘ಸ್ವಸ್ತಿಕ್ ಶ್ರೀ’ ರಾಜ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಆಯ್ಕೆಯಾಗಿದ್ದಾರೆ. ಕಳೆದ ಎರಡು ದಶಕಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಮತ್ತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೈಗೊಂಡ ಜನಪರ ಕೆಲಸ ಕಾರ್ಯಗಳನ್ನು ಮುಂದಿರಿಸಿ ಈ ಪ್ರಶಸ್ತಿ ನೀಡಲಾಗುತಿದೆ. ಶ್ರೀನಿವಾಸ್ ನಾಯಕ್ ಇಂದಾಜೆ, ಮುಂಬಯಿ ಉದ್ಯಮಿ
ಮಂಜುನಾಥ ಬನ್ನೂರು ಮತ್ತು ನವದೆಹಲಿ ಪಾಲಂ, ವಿಂಗ್ ಕಮಾಂಡರ್ ಪ್ರೀತಮ್ ಶೆಟ್ಟಿ ಮಜಲೋಡಿ ಅವರಿಗೆ ಈ ಬಾರಿಯ ಪ್ರಶಸ್ತಿ ನೀಡಲಾಗುವುದು. ನ.13ರಂದು ಸಂಜೆ 7ಗಂಟೆಗೆ ಪುಂಜಾಲಕಟ್ಟೆಯಲ್ಲಿ ಜರಗುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಸಂಸದ ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಶ್ರೀನಿವಾಸ್ ನಾಯಕ್ ಅವರು ಹದಿನೈದು ವರುಷ ಕಾಲ ಉದಯ ಟಿವಿ ಚಾನೆಲ್ನ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿ ಸಮಾಜದ ಅಭಿವೃದ್ದಿಗೆ ಬಹಳಷ್ಟು ಉತ್ತಮ ವರದಿಗಳನ್ನು ನೀಡಿದವರು. ರಾಜ್ಯ ಹಾಗು ರಾಷ್ಟ್ರೀಯ ವಾಹಿನಿಗಳ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೇಸಿಸ್ ಪುರಸ್ಕಾರ ,ಜಿಲ್ಲಾ ರಾಜೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ಪುರಸ್ಕಾರ ಪಡೆದದುಕೊಂಡವರು ,ಎರಡು ಬಾರಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ,ಪತ್ರಕರ್ತರ ಗೃಹನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಸರಕಾರದ ಗಮನ ಸೆಳೆದ ಗ್ರಾಮ ವಾಸ್ತವ್ಯ ,ಬ್ರಾಂಡ್ ಮಂಗಳೂರು ಕಾರ್ಯಕ್ರಮಗಳು, ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಪೂರಕವಾಗಿ ಸರಕಾರದ ಯೋಜನೆಯನ್ನು ಪತ್ರಕರ್ತರ ಸಂಘದ ಮೂಲಕ ಕಾರ್ಯಗತಗೊಳಿಸಿದ್ದಾರೆ.