ಸುಳ್ಯ:ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವತಿಯಿಂದ ಸುನಾದ ಸಂಗೀತೋತ್ಸವ ಡಿ.28ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ನಡೆಯಿತು.ದಿನಪೂರ್ತಿ ನಡೆದ ಸಂಗೀತೋತ್ಸವದ ಅಂಗವಾಗಿ ಬೆಳಗ್ಗೆ ದೀಪೋಜ್ವಲನ, ಗುರುವಂದನೆ,ಸುನಾದ ಸಂಗೀತ ಕಲಾ ಶಾಲೆಯ
ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ಮಧ್ಯಾಹ್ನ ‘ಪಂಚರತ್ನ ಗೋಷ್ಠಿ ಗಾಯನ’ ನಡೆಯಿತು.ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನೆರೆದ ಸಂಗೀತಾಸಕ್ತರ ಮನ ಗೆದ್ದಿತು. ವಿದ್ವಾನ್ ಹೆಮ್ಮಿಗೆ ಎಸ್. ಪ್ರಶಾಂತ್ ಅವರ ಹಾಡುಗಾರಿಕೆ ಮನಸೂರೆಗೊಂಡಿತು. ವಯಲಿನ್ನಲ್ಲಿ ವಿದ್ವಾನ್ ವೇಣುಗೋಪಾಲ ಶಾನುಭೋಗ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ.ಈಶ್ವರ ಭಟ್, ಘಟಂನಲ್ಲಿ ವಿದ್ವಾನ್ ತುಮಕೂರು ಬಿ. ಶಶಿಶಂಕರ್ ಸಹಕರಿಸಿದರು.

















